kannadaprabha_2026-04-22_7yiqtmeg_donaldtrumpiranamerica.jpg
Spread the love

ದಿನಾಂಕ:26-04-2026(ಹಾಯ್ ಉಡುಪಿ ನ್ಯೂಸ್)

ವಾಷಿಂಗ್ಟನ್‌: ಸೀಕ್ರೆಟ್ ಸರ್ವಿಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಅದ್ಭುತವಾಗಿ ಕೆಲಸ ಮಾಡಿದ್ದು, ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇಳಿದ್ದಾರೆ.

ಶ್ವೇತಭವನದ ಸಮೀಪ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವರದಿಗಾರರ ಔತಣಕೂಟದ ವೇಳೆ ನಡೆದ ಗುಂಡಿನ ದಾಳಿಯ ಬಗ್ಗೆ ಟ್ರಂಪ್‌ ಅವರು ತಮ್ಮ ಟ್ರೂಥ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಇದು ವಿಭಿನ್ನವಾದ ಸಂಜೆ. ಸೀಕ್ರೆಟ್ ಸರ್ವಿಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಅದ್ಭುತವಾಗಿ ಕೆಲಸ ಮಾಡಿದ್ದು, ಅತ್ಯಂತ ವೇಗವಾಗಿ ಮತ್ತು ಧೈರ್ಯದಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೂಟರ್‌ನನ್ನು ಈಗಾಗಲೇ ಬಂಧಿಸಲಾಗಿದೆ. ನಾನು ಕಾರ್ಯಕ್ರಮವನ್ನು ಮುಂದುವರಿಸಲು ಸೂಚಿಸಿದ್ದೇನೆ. ಆದರೆ, ಭದ್ರತೆಯ ದೃಷ್ಟಿಯಿಂದ ಅಂತಿಮ ನಿರ್ಧಾರವನ್ನು ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದೇನೆ. ಈ ಅದ್ಧೂರಿ ಕಾರ್ಯಕ್ರಮವನ್ನು ಮುಂದಿನ 30 ದಿನಗಳೊಳಗೆ ಮತ್ತೆ ಆಯೋಜಿಸಲಾಗುವುದು ಎಂದು ಘೋಷಿಸಿದ್ದಾರೆ.

ನಂತರ ಭದ್ರತಾ ಪ್ರೋಟೋಕಾಲ್ ಪ್ರಕಾರ ಸ್ಥಳವನ್ನು ಖಾಲಿ ಮಾಡುವಂತೆ ಸೂಚನೆ ಬಂದ ಕಾರಣ ಎಲ್ಲರನ್ನು ಹೊರಗೆ ಕರೆದೊಯ್ಯಲಾಯಿತು ಎಂದು ಕೂಡ ಅವರು ತಿಳಿಸಿದ್ದಾರೆ. ಇದೇ ವೇಳೆ ಪ್ರಥಮ ಮಹಿಳೆ, ಉಪಾಧ್ಯಕ್ಷರು ಮತ್ತು ಸಚಿವ ಸಂಪುಟದ ಎಲ್ಲ ಸದಸ್ಯರು ಸುರಕ್ಷಿತರಾಗಿದ್ದಾರೆಂದೂ ದೃಢಪಡಿಸಿದ್ದಾರೆ. ಈ ಬಗ್ಗೆ ವೈಟ್ ಹೌಸ್ ಪ್ರೆಸ್ ಬ್ರಿಫಿಂಗ್ ರೂಮ್‌ನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ವಾಷಿಂಗ್ಟನ್ ಡಿಸಿ ಯಲ್ಲಿ ನಡೆದ ಪ್ರಸಿದ್ಧ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ ನಡೆದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಾಜಕೀಯ ನಾಯಕರು, ಪತ್ರಕರ್ತರು, ಸಿನಿತಾರೆಯರು ಹಾಗೂ ವಿವಿಧ ದೇಶಗಳ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದ ಈ ಕಾರ್ಯಕ್ರಮ ಸಾಮಾನ್ಯವಾಗಿ ಹಾಸ್ಯ, ರಾಜಕೀಯ ವ್ಯಂಗ್ಯ ಮತ್ತು ಸ್ನೇಹಪೂರ್ಣ ಸಂಭಾಷಣೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಈ ಬಾರಿ ಕಾರ್ಯಕ್ರಮ ಮಧ್ಯದಲ್ಲೇ ಗುಂಡಿನ ಸದ್ದು ಕೇಳಿಬಂದ ಪರಿಣಾಮ, ಕೆಲವೇ ಕ್ಷಣಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅತಿಥಿಗಳು ಭೋಜನವನ್ನು ಸವಿಯುತ್ತಿರುವ ವೇಳೆ ಏಕಾಏಕಿ ಗುಂಡಿನ ಶಬ್ದಗಳು ಕೇಳಿಬಂದಿತ್ತು. ಸುಮಾರು ಐದರಿಂದ ಎಂಟು ಸದ್ದುಗಳು ಕೇಳಿ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ತಕ್ಷಣವೇ ಭದ್ರತಾ ಸಿಬ್ಬಂದಿ ಒಳನುಗ್ಗಿ ಎಲ್ಲರಿಗೂ ಕೆಳಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ಕೆಲವರು ಭಯದಿಂದ ಮೇಜಿನ ಕೆಳಗೆ ಆಶ್ರಯ ಪಡೆದರೆ, ಇನ್ನೂ ಕೆಲವರು ಗಾಬರಿಯಿಂದ ಸುತ್ತಮುತ್ತ ನೋಡುತ್ತಾ ಏನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಕೆಲವೇ ಕ್ಷಣಗಳಲ್ಲಿ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು ಎಂದು ವಿವರಿಸಿದ್ದಾರೆ.

ಸಭಾಂಗಣದಲ್ಲಿ ಇದ್ದ ಅನೇಕ ಅತಿಥಿಗಳು ಈ ಘಟನೆ ತಮ್ಮ ಜೀವನದಲ್ಲಿ ಮರೆಯಲಾಗದ ಅನುಭವ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸೀಕ್ರೆಟ್ ಸರ್ವಿಸ್ ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳು ಅತ್ಯಂತ ವೇಗವಾಗಿ ಕ್ರಮ ಕೈಗೊಂಡವು. ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಕ್ರಮಗಳ ಭಾಗವಾಗಿ ಸಂಪೂರ್ಣ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದ್ದು, ಅತಿಥಿಗಳನ್ನು ಕ್ರಮಬದ್ಧವಾಗಿ ಹೊರಗೆ ಕಳುಹಿಸಲಾಯಿತು. ನ್ಯಾಷನಲ್ ಗಾರ್ಡ್ ಪಡೆಗಳನ್ನೂ ಸ್ಥಳಕ್ಕೆ ನಿಯೋಜಿಸಲಾಗಿದ್ದು, ಹೊರಭಾಗದಲ್ಲೂ ಭದ್ರತೆ ಹೆಚ್ಚಿಸಲಾಯಿತು. ಯಾವುದೇ ಅನಾಹುತ ಸಂಭವಿಸದಿರುವುದು ಭದ್ರತಾ ಸಿಬ್ಬಂದಿಯ ತ್ವರಿತ ಕ್ರಮದ ಫಲ ಎಂದು ಹೇಳಿದ್ದಾರೆ.

error: No Copying!