
ಕೊಲ್ಲೂರು: ದಿನಾಂಕ: 08-02-2025(ಹಾಯ್ ಉಡುಪಿ ನ್ಯೂಸ್) ಯುವಕನೋರ್ವ ಜೀಪ್ ವಾಹನವನ್ನು ಶಾಲೆಯೊಂದರ ಆಟದ ಮೈದಾನದಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಶಾಲೆಗೆ ಹಾನಿ ಮಾಡಿ ನಷ್ಟ ಉಂಟು ಮಾಡಿದ್ದಾನೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಂದೂರು, ಉಪ್ಪುಂದ ಗ್ರಾಮದ ನಿವಾಸಿ ನಾಗರಾಜ್(58) ಎಂಬವರು ಮುಜರಾಯಿ ಇಲಾಖೆಗೆ ಒಳಪಟ್ಟ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಕೊಲ್ಲೂರು ಶ್ರೀ ಮೂಕಾಂಬಿಕಾ ಫ್ರೌಡಶಾಲೆಯ ಮುಖ್ಯ ಶಿಕ್ಷಕರಾಗಿದ್ದು ದಿನಾಂಕ 07/02/2025 ರಂದು ರಾತ್ರಿ ಸುಮಾರು 9:00 ಗಂಟೆಗೆ, ಕೌಶಿಕ ಎಂಬ ಯುವಕನು KA-20-A-1837ನೇ ನೊಂದಣಿ ನಂಬ್ರ ಇರುವ ಜೀಪನ್ನು ಶಾಲೆಯ ಆಟದ ಮೈದಾನಕ್ಕೆ ಚಲಾಯಿಸಿಕೊಂಡು ಬಂದು, ಆಟದ ಮೈದಾನದಲ್ಲಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ (ವ್ಹೀಲಿಂಗ್) ಚಲಾಯಿಸಿದ್ದರಿಂದ ಶಾಲಾ ಆಟದ ಮೈದಾನದ ಒಳಚರಂಡಿಗೆ ಮುಚ್ಚಿದ ಸಿಮೆಂಟ್ ಹಲಗೆ, ಹಾಗೂ ಟ್ರಾಕ್ ನ ಇನ್ನರ್ ಎಜ್ (ಒಳಪಟ್ಟಿ) ಹಾನಿಗೊಂಡು, ಶಾಲೆಗೆ ಒಟ್ಟು ರೂ 50,000/- ನಷ್ಟ ಉಂಟಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ:281 BNS & 2 (a) The prevention of Destruction & loss of Property Act ರಂತೆ ಪ್ರಕರಣ ದಾಖಲಾಗಿದೆ.