ಬೆಂಗಳೂರು: ದಿನಾಂಕ :06-08-2026(ಹಾಯ್ ಉಡುಪಿ ನ್ಯೂಸ್) ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಎ-14 ಪ್ರದೋಶ್ , ವಿನಯ್, ರವಿಶಂಕರ್ ಈ ಮೂವರು ಆರೋಪಿಗಳು ತಮ್ಮನ್ನ ಮಾಫಿ ಸಾಕ್ಷಿ ಮಾಡಿ ಅಂತ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಸರ್ಕಾರದ ಪರ ಎಸ್ಪಿಪಿ (SPP) ಪ್ರಬಲವಾದ ವಾದ ಮಂಡಿಸಿದ್ರು, ಇದಕ್ಕೆ ಪ್ರತ್ಯುತ್ತರ ಎನ್ನುವಂತೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಪ್ರತಿವಾದ ಮಂಡಿಸಿದ್ದಾರೆ.
SPP ಪ್ರಸನ್ನ ಕುಮಾರ್ ಖಡಕ್ ವಾದ: ಸೆಕ್ಷನ್ 307 ಅಡಿಯಲ್ಲಿ ಮಾಫಿ ಸಾಕ್ಷಿ ಕೋರಿ ಅರ್ಜಿ ಸಲ್ಲಿಕೆ ಆಗಿದೆ. ಈ ಸೆಕ್ಷನ್ 307 ಏನ್ ಹೇಳುತ್ತೆ ಅಂತ ಕೋರ್ಟ್ಗೆ SPP ಪ್ರಸನ್ನ ಕುಮಾರ್ ವಿವರಿಸಿದ್ರು. ಯಾವ ಸಂದರ್ಭದಲ್ಲಿ ಮಾಫಿ ಸಾಕ್ಷಿ ಅರ್ಜಿ ಪರಿಗಣಿಸಬಹುದು. ಈ ಬಗ್ಗೆ ಹೈಕೋರ್ಟ್ ತೀರ್ಪುಗಳ ಬಗ್ಗೆ ಕೂಡ SPP ಉಲ್ಲೇಖ ಮಾಡಿದ್ರು.
ವಿನಯ್ ಕುಲಕರ್ಣಿ ಕೇಸ್ ಉಲ್ಲೇಖ: ಯೋಗೀಶ್ ಗೌಡ ಕೇಸ್ ಬಗ್ಗೆಯೂ ಉಲ್ಲೇಖಿಸಿ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದಾರೆ. ಯೋಗೀಶ್ ಗೌಡ ಕೇಸ್ನಲ್ಲಿ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿ ಆಗಿದ್ದ ಬಗ್ಗೆಯೂ ಉಲ್ಲೇಖಿಸಿದ ಪ್ರಸನ್ನ ಕುಮಾರ್ ಅವರು, ಮಾಫಿ ಸಾಕ್ಷಿ ಆದೇಶವನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದರು. ಮಾಫಿ ಸಾಕ್ಷಿ ಮೊದಲು ಹೇಳಿಕೆ ನೀಡಲಿ, ಆ ಬಳಿಕ ಅದನ್ನು ಪರಿಗಣಿಸಬೇಕಾ ಬೇಡವಾ? ಅನ್ನೋ ತೀರ್ಮಾನ ಮಾಡ್ತೀವಿ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.
ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ: ಈ ವೇಳೆ ಎಸ್ ಎಸ್ ಪಿ ಅವರ ವಾದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮತ್ತು ವಾದ ಮಂಡಿಸುವ ಮೂಲಭೂತ ಹಕ್ಕು ಆರೋಪಿಗೆ ಇದೆ ಎಂದು ಪ್ರತಿಪಾದಿಸಿದ್ದಾರೆ. ಮಾಫಿ ಸಾಕ್ಷಿ ಕೋರಿದ ಅರ್ಜಿಯ ಪ್ರತಿಯನ್ನು ನಮಗೆ ನೀಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸಾಕ್ಷಿ ಹೇಳುತ್ತೇನೆ ಎಂದ ತಕ್ಷಣ ಕ್ಷಮಾದಾನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಪ್ರದೋಷ್ ಮೇಲಿರುವ ಆರೋಪಗಳು ಏನು? ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದಾನೆ. ಕೊಲೆ ಮತ್ತು ಸಾಕ್ಷ್ಯ ನಾಶದಲ್ಲಿ ಭಾಗಿಯಾಗಿದ್ದಾನೆ . ಸಾಕ್ಷ್ಯ ಮುಚ್ಚಿ ಹಾಕಲು ದರ್ಶನ್ ಕಡೆಯಿಂದ 30 ಲಕ್ಷ ರೂ. ಹಣ ತೆಗೆದುಕೊಂಡಿದ್ದ ಹಾಗೂ ಪ್ರಕರಣದಲ್ಲಿ ಬೇರೆಯವರನ್ನು ಶರಣಾಗಿಸಲು ಸಂಚು ರೂಪಿಸಿದ್ದ ಎನ್ನುವ ಆರೋಪವಿದೆ.
ಇದಲ್ಲದೇ, ರೇಣುಕಾಸ್ವಾಮಿ ಸಾವಿನ ವಿಚಾರವನ್ನು ದರ್ಶನ್ ಗೆ ತಿಳಿಸಿದ್ದು, ಪವಿತ್ರಾ ಗೌಡರನ್ನು ಶೆಡ್ ಗೆ ಕರೆತಂದ ಆರೋಪವೂ ಈತನ ಮೇಲಿದೆ. ಒಂದು ವೇಳೆ ಈತ ನಿಜವಾದ ಸಾಕ್ಷಿ ಹೇಳಿದ್ದಲ್ಲಿ (approvers) ದರ್ಶನ್ ಗೆ ಕಂಟಕ ಮತ್ತಷ್ಟು ಕಂಟಕವಾಗಲಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪಆಗಸ್ಟ್ 10 ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.
