ಕಾಪು: ದಿನಾಂಕ 24/06/2026 (ಹಾಯ್ ಉಡುಪಿ ನ್ಯೂಸ್) ಪಾಂಗಾಳ, ಮಟ್ಟು ಎಂಬಲ್ಲಿರುವ ಪಾಪನಾಶಿನಿ ನದಿಯಿಂದ ಮರಳು ಕಳ್ಳತನ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿ ಯಂತೆ ಕಾಪು ಪೊಲೀಸ್ ಠಾಣೆಯ ಪಿಎಸ್ಐ ಶುಭಕರ ಅವರು ದಾಳಿ ನಡೆಸಿದ್ದಾರೆ.
ಕಾಪು ಪೊಲೀಸ್ ಠಾಣೆಯ ಪಿ.ಎಸ್.ಐ (ತನಿಖೆ) ಶುಭಕರ ಅವರು ದಿನಾಂಕ :23-06-2026 ರಂದು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕಾಪು ತಾಲೂಕು ಮಟ್ಟು ಗ್ರಾಮದ, ಪಾಂಗಾಳ ಮಟ್ಟು ಎಂಬಲ್ಲಿರುವ ಪಾಪನಾಶಿನಿ ನದಿಯಿಂದ ಯಾರೋ ಕಳ್ಳರು ದೋಣಿಗಳ ಮೂಲಕ ಅಕ್ರಮವಾಗಿ ಮರಳನ್ನು ತೆಗೆದು ನದಿಯ ದಡದಲ್ಲಿ ಸಂಗ್ರಹಿಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಮಟ್ಟು ಗ್ರಾಮದ, ಪಾಂಗಾಳ ಮಟ್ಟು ಎಂಬಲ್ಲಿರುವ ಪಾಪನಾಶಿನಿ ನದಿಯ ಬಳಿ ಹೋಗಿ ನೋಡಿದಾಗ ನದಿಯ ದಡದಲ್ಲಿ ಸುಮಾರು 3 ಯೂನಿಟ್ ನಷ್ಟು ಮರಳನ್ನು ಸಂಗ್ರಹಿಸಿ ಇಟ್ಟಿರುವುದು ಕಂಡುಬಂದಿದೆ .
ಮರಳು ರಾಶಿಯ ಬದಿಯಲ್ಲಿ ಪೈಬರ್ ಬುಟ್ಟಿಗಳು ಹಾಗೂ ಹಾರೆ(ಸಲಿಕೆ) ಇರುವುದು ಕಂಡು ಬಂದಿರುತ್ತದೆ. ಸ್ಥಳದ ಆಸುಪಾಸಿನಲ್ಲಿ ಮರಳನ್ನು ಸಂಗ್ರಹಿಸಲು ಉಪಯೋಗಿಸಿದ ದೋಣಿಗಳನ್ನು ಹುಡುಕಾಡಿದ್ದು, ದೋಣಿಗಳು ಕಂಡುಬಂದಿರುವುದಿಲ್ಲ. ಹಾಗೂ ನದಿಯಿಂದ ಮರಳನ್ನು ಸಂಗ್ರಹಿಸಿದ ವ್ಯಕ್ತಿಗಳು ಕೂಡಾ ಕಂಡುಬಂದಿರುವುದಿಲ್ಲ. ನದಿಯಿಂದ ಮರಳನ್ನು ಸಂಗ್ರಹಿಸಿದ ವ್ಯಕ್ತಿಗಳು ಮರಳನ್ನು ತೆಗೆಯಲು ಉಪಯೋಗಿಸಿದ ದೋಣಿಗಳನ್ನು ಎಲ್ಲಿಯೋ ಸ್ಥಳಾಂತರಿಸಿರುವುದು ಕಂಡು ಬಂದಿರುತ್ತದೆ. ನದಿಯ ದಡದಲ್ಲಿ ಸಂಗ್ರಹಿಸಿಟ್ಟ ಮರಳಿನ ಅಂದಾಜು ಮೌಲ್ಯ ಸುಮಾರು 15,000/- ರೂ ಆಗಬಹುದು. ಯಾರೋ ಕಳ್ಳರು ತಮ್ಮ ಸ್ವಂತ ಲಾಭಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ನದಿಯಿಂದ ತೆಗೆದು ಸಂಗ್ರಹಣೆ ಮಾಡಿರುವುದು ಕಂಡು ಬಂದಿದೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 303 (2) BNS & ಕಲಂ 4, 4(1ಎ), 21 MMDR ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
