kannadaprabha_2026-04-14_c4s9gv5f_MLA-delhi-3.jpg
Spread the love

ದಿನಾಂಕ:15-04-2026(ಹಾಯ್ ಉಡುಪಿ ನ್ಯೂಸ್)

ನವದೆಹಲಿ/ಕೊಪ್ಪಳ: ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ದೆಹಲಿಗೆ ತೆರಳಿರುವ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಮೇ 15ರೊಳಗೆ ಸಂಪುಟ ಪುನರ್ ರಚನೆ ಪ್ರಕ್ರಿಯೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗದೆ ಕರ್ನಾಟಕಕ್ಕೆ ವಾಪಸ್ ಆಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಗೆ ಪಡೆದು ದೆಹಲಿಗೆ ಬಂದಿದ್ದು, ಮತ್ತಷ್ಟು ಶಾಸಕರು ದೆಹಲಿಗೆ ಬರುವ ಸಾಧ್ಯತೆಯಿದೆ. ನಾಳೆ ವೇಣುಗೋಪಾಲ್ ಅವರನ್ನು ಭೇಟಿಯಾಗದೆ ಬೆಂಗಳೂರಿಗೆ ವಾಪಸ್ ಆಗಲ್ಲ ಎಂದು ತಿಳಿಸಿದರು.

ಈ ಮಧ್ಯೆ ಕೊಪ್ಪಳದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆದ ಶಾಸಕ ಬಸವರಾಜ ರಾಯರೆಡ್ಡಿ, 25 ಸಚಿವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಹೊಸಬರಿಗೆ ಅವಕಾಶ ಕೊಟ್ಟರೆ ಅವರಿಗೂ ಅನುಭವವಾಗುತ್ತದೆ. ಇರುವವರೇ ಕಾಯಂ ಆಗಿ ಇರಬೇಕು ಎಂದರೆ ಹೇಗೆ ಸಾಧ್ಯವಾಗುತ್ತದೆ. ಹೊಸಬರು ಅವಕಾಶ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ನಾನು ಹೆಚ್ಚು ಬಾರಿ ಗೆದ್ದು ಶಾಸಕನಾಗಿದ್ದರೂ ಸಚಿವ ಸ್ಥಾನ ಕೊಟ್ಟಿಲ್ಲ. ಆರ್ಥಿಕ ಸಲಹೆಗಾರ ಹುದ್ದೆ ಕೊಟ್ಟಿದ್ದಾರೆ. ಆದರೆ ಈ ಹುದ್ದೆಯಿಂದ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಉತ್ತಮ ಬಜೆಟ್ ಕೊಡಬಹುದೇ ವಿನ: ಯಾವುದೇ ಅಧಿಕಾರ ಇರಲ್ಲ ಎಂದು ನಿರಾಸೆ ವ್ಯಕ್ತಪಡಿಸಿದರು.

error: No Copying!