images-20.jpeg
Spread the love

ದಿನಾಂಕ:20-03-2026 (ಹಾಯ್ ಉಡುಪಿ ನ್ಯೂಸ್)

ನವದೆಹಲಿ: ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯನ್ನು ನೀಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯಾದ್ಯಂತ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿನ ಕೊರತೆಯು ಜೀವನೋಪಾಯವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಸುಮಾರು 50,000 ಸಿಲಿಂಡರ್‌ಗಳ ಬೇಡಿಕೆಯ ನಡುವೆ ರಾಜ್ಯವು ಪ್ರಸ್ತುತ ದಿನಕ್ಕೆ ಕೇವಲ 1,000 ಸಿಲಿಂಡರ್‌ಗಳನ್ನು ಮಾತ್ರ ಪಡೆಯುತ್ತಿದೆ. ಪರಿಣಾಮ ಅನೇಕ ಸಂಸ್ಥೆಗಳು ಮತ್ತು ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ಎದುರಿಸುತ್ತಿವೆ ಎಂದು ಹೇಳಿದ್ದಾರೆ.

“ಎಲ್ ಪಿಜಿ ಬಿಕ್ಕಟ್ಟು ಕರ್ನಾಟಕದಾದ್ಯಂತ ಪೂರೈಕೆ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದ್ದು, ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಗಳ ಕೊರತೆಯನ್ನು ನೀಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಾನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ಎಸ್‌ಪುರಿಗೆ ಪತ್ರ ಬರೆದಿದ್ದೇನೆ” ಎಂದು ಸಿಎಂ ತಿಳಿಸಿದ್ದಾರೆ.

“ರಾಜ್ಯ ಸರ್ಕಾರವು ಈಗಾಗಲೇ ಅಗತ್ಯ ವಲಯಗಳಿಗೆ ಪೂರೈಕೆಯನ್ನು ನಿಯಂತ್ರಿಸಲು ಮತ್ತು ಆದ್ಯತೆ ನೀಡಲು ಕ್ರಮಗಳನ್ನು ತೆಗೆದುಕೊಂಡಿದೆ. ಆದಾಗ್ಯೂ, ಸುಮಾರು 50,000 ಸಿಲಿಂಡರ್‌ಗಳ ಬೇಡಿಕೆ ಮತ್ತು ದಿನಕ್ಕೆ ಕೇವಲ 1,000 ಸಿಲಿಂಡರ್‌ಗಳ ಪೂರೈಕೆಗೆ ಸೀಮಿತವಾಗಿರುವುದರಿಂದ, ಪರಿಸ್ಥಿತಿ ನಿರ್ಣಾಯಕವಾಗಿಯೇ ಇದೆ. ವಾಣಿಜ್ಯ ಸಿಲಿಂಡರ್ ಗಳ ಕೊರತೆಯಿಂದ ಹೋಟೆಲ್‌ಗಳು ಮುಚ್ಚಬೇಕಾದ ಸ್ಥಿತಿ ಬಂದಿದೆ. ಕರ್ನಾಟಕಕ್ಕೆ ವಾಣಿಜ್ಯ ಮತ್ತು ಆಟೋ ಎಲ್‌ಪಿಜಿಯ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಕ್ಕೆ ತಕ್ಷಣವೇ ಎಲ್ ಪಿಜಿ ಹಂಚಿಕೆ ಮಾಡುವಂತೆ ಕೋರಿದ್ದೇನೆ” ಎಂದಿದ್ದಾರೆ.

ಗೃಹ ಬಳಕೆಯ ಅನಿಲ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಈಗಾಗಲೇ ಐಟಿ ವ್ಯವಸ್ಥೆ ಇದ್ದರೂ, ವಾಣಿಜ್ಯ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ವೇದಿಕೆ ಲಭ್ಯವಿಲ್ಲ.

ಅದೇ ರೀತಿಯಲ್ಲಿ, ಆಟೋ LPG ಅನೇಕ ಆಟೋ ರಿಕ್ಷಾಗಳಿಗೆ ಅತ್ಯಂತ ಪ್ರಮುಖ ಇಂಧನವಾಗಿದ್ದು, ಇದು ನಗರದ ಕಟ್ಟಕಡೆಯ ಸಂಪರ್ಕ ವ್ಯವಸ್ಥೆಯ ಮುಖ್ಯ ಭಾಗವಾಗಿದ್ದು ಅನೇಕ ಚಾಲಕರ ಜೀವನೋಪಾಯವನ್ನು ಬೆಂಬಲಿಸುತ್ತದೆ. ಆದರೆ ಆಟೋ LPG ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ವ್ಯವಸ್ಥೆ ಇಲ್ಲದ ಕಾರಣ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಉಂಟಾಗಿದೆ.

ಭಾರತಕ್ಕೆ ಶೀಘ್ರದಲ್ಲೇ 2 ಟ್ಯಾಂಕರ್‌ಗಳು ಬರಲಿರುವುದಾಗಿ ನಮಗೆ ತಿಳಿದುಬಂದಿದೆ, ಇದು ಮೇಲ್ಕಂಡ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆದ್ದರಿಂದ, ರಾಜ್ಯದ ಕಾರ್ಯಾಚರಣಾ ಅಗತ್ಯತೆಗಳು ಹಾಗೂ ವಿಶೇಷ ಅವಲಂಬನೆ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಬೆಂಗಳೂರು ನಗರದ ದೃಷ್ಟಿಯಿಂದ, ಕರ್ನಾಟಕಕ್ಕೆ ಸಮರ್ಪಕ ಪ್ರಮಾಣದಲ್ಲಿ ವಾಣಿಜ್ಯ LPG ಮತ್ತು ಆಟೋ LPG ಹಂಚಿಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಲು ನಿಮ್ಮ ಮಧ್ಯಸ್ಥಿಕೆಯನ್ನು ವಿನಂತಿಸುತ್ತೇನೆ ಎಂದು ಸಿಎಂ ಪತ್ರದಲ್ಲಿ ಬರೆದಿದ್ದಾರೆ.

error: No Copying!