ಬ್ರಹ್ಮಾವರ: ದಿನಾಂಕ:05-03-2026 (ಹಾಯ್ ಉಡುಪಿ ನ್ಯೂಸ್) ಕ್ಯಾಶ್ಯೂ ಇಂಡಸ್ಟ್ರೀಸ್ ಒಂದರ ಮೂವರು ನೌಕರರು ಸೇರಿಕೊಂಡು ಸಂಸ್ಥೆಗೆ ಒಂದು ಕೋಟಿ ಆರುವತ್ತೆರಡು ಲಕ್ಷ ರೂಪಾಯಿ ವಂಚಿಸಿದ್ದಾರೆಂದು ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಶಿರಿಯಾರ ಗ್ರಾಮದ ನಿವಾಸಿ ಎಸ್. ಯೋಗೀಶ್, (53) ಎಂಬವರು ವಿಶ್ವಂಬರ ಕ್ಯಾಶ್ಯೂ ಇಂಡಸ್ಟ್ರೀಸ್ ನ ಮಾಲಕರಾಗಿದ್ದು, ಈ ಸಂಸ್ಥೆಯಲ್ಲಿ ತೆಂಗಿನ ಕಾಯಿ, ಕೊಬ್ಬರಿ, ಅಡುಗೆ ಎಣ್ಣೆಯನ್ನು ಖರೀದಿ ಮಾಡಿ ಮಾರಾಟ ಮಾಡುವುದು ಮತ್ತು ಗೇರು ಬೀಜ ಖರೀದಿ ಮಾಡಿ ಸಂಸ್ಕರಿಸಿ ಮಾರಾಟ ಮಾಡುವ ಉದ್ಯಮ ವಾಗಿರುತ್ತದೆ.
ಯೋಗೀಶ್ ರವರ ಸಂಸ್ಥೆಯಲ್ಲಿ ಲೆಕ್ಕ ಪತ್ರ ಕಾರ್ಯ ನಿರ್ವಹಣೆ ಮತ್ತು ದಾಸ್ತಾನು ಮೇಲ್ವಿಚಾರಕ ಹುದ್ದೆಯಲ್ಲಿ ಕೆಲಸ ಮಾಡಿಕೊಂಡಿದ್ದ 1 ನೇ ಆರೋಪಿತನಾದ ರತೀಶ್ ಎಂಬವನು ಆತನ ಸ್ನೇಹಿತರಾದ 2 ನೇ ಆರೋಪಿ ರಾಜೇಶ, 3 ನೇ ಆರೋಪಿ ಸುಮಂತ್ ಹಾಗೂ ಇತರ ಆರೋಪಿತರೊಂದಿಗೆ ಸೇರಿಕೊಂಡು ಅಕ್ರಮ ಲಾಭ ಮಾಡುವ ಉದ್ಧೇಶದಿಂದ ಅಪ್ರಾಮಾಣಿಕವಾಗಿ ದಿನಾಂಕ 01.04.2023 ರಿಂದ ದಿನಾಂಕ 18.05.2025 ರ ಮಧ್ಯಾವಧಿಯಲ್ಲಿ ಸಂಸ್ಥೆಗೆ ಸಂಬಂಧಿಸಿದ ರೂಪಾಯಿ 56,01,600/- ಮೌಲ್ಯದ 24,896 ಕಿಲೋ ತೂಕದ ಕೊಬ್ಬರಿ ಹಾಗೂ ರೂಪಾಯಿ 1,05,72,900/- ಮೌಲ್ಯದ 1,62,660 ಕಿಲೋ ತೂಕದ ತೆಂಗಿನ ಕಾಯಿಯನ್ನು ಅಕ್ರಮವಾಗಿ ಮಾರಾಟ ಮಾಡಿ ಒಟ್ಟು ರೂಪಾಯಿ 1,61,74,500/- ಹಣವನ್ನು ಸ್ವಂತಕ್ಕೆ ಬಳಸಿಕೊಂಡು ವಂಚಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ US 316(3), (4), 323 RW 3(5) BNS ರಂತೆ ಪ್ರಕರಣ ದಾಖಲಾಗಿದೆ.
