ಪಡುಬಿದ್ರಿ: ದಿನಾಂಕ:10-12-2025(ಹಾಯ್ ಉಡುಪಿ ನ್ಯೂಸ್) ರಾ.ಹೆ.66 ರ ಎರ್ಮಾಳು ತೆಂಕ ಸೇತುವೆ ಬಳಿ ಡಿಸೆಂಬರ್ 10 ರ ತಡ ರಾತ್ರಿ 2 ಘಂಟೆಯ ಸುಮಾರಿಗೆ ನಡೆದ ಅಪಘಾತದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಓರ್ವ ವ್ಯಕ್ತಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಮಂಗಳೂರಿನ ಗೌಜಿ ಇವೆಂಟ್ಸ್ ಇದರ ಮಾಲೀಕ ಅಭಿಷೇಕ್ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರನ್ನು ಅವರೇ ಚಲಾಯಿಸುತ್ತಿದ್ದರು ಎನ್ನಲಾಗಿದೆ . ಸಹಪ್ರಯಾಣಿಕರು ಯಾರೂ ಇಲ್ಲವಾಗಿದ್ದು , ಹಿಂದಿನ ವಾಹನಗಳಲ್ಲಿ ಅವರ ಗೆಳೆಯರು ಇದ್ದು ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಧರಾಶಾಯಿಯಾಗಿ, ಕಾರು ನಜ್ಜುಗುಜ್ಜಾಗಿದೆ. ಈ ಸಂದರ್ಭ ವಿದ್ಯುತ್ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.
ಕೂಡಲೇ ಅಭಿಷೇಕ್ ರವರನ್ನು ಸ್ಥಳೀಯರ ಸಹಕಾರದಿಂದ ಆತನ ಸ್ನೇಹಿತರು ಮುಕ್ಕದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಹೆಜಮಾಡಿ ಟೋಲ್ ಸಿಬ್ಬಂದಿ ಮತ್ತು ಪಡುಬಿದ್ರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
