IMG-20251107-WA0003.jpg
Spread the love

ದೇವರು ಎಂಬ ನಂಬಿಕೆಯ ಸುತ್ತ ಇರುವ ಭಕ್ತಿಯೇ ದೈವಿಕ ಶಕ್ತಿ. ಇದು ಸರ್ವಶಕ್ತ, ಸರ್ವಾಂತರ್ಯಾಮಿ,
ಸರ್ವವ್ಯಾಪಿ, ಅಗೋಚರ, ಅತಿಮಾನುಷ, ಅದೃಶ್ಯ ಶಕ್ತಿ. ಬಹುತೇಕ ಜಗತ್ತಿನ ಎಲ್ಲಾ ಕಡೆಯೂ ಈ ಪರಿಕಲ್ಪನೆಯ ವಿಧಾನ ಒಂದೇ ರೀತಿಯಲ್ಲಿದೆ. ಧರ್ಮಗಳು, ಮತಗಳು, ಭಾಷೆಗಳು, ಪ್ರದೇಶಗಳು, ಆಡಳಿತಾತ್ಮಕ ವ್ಯವಸ್ಥೆಗಳು ಬೇರೆ ಬೇರೆ ಇರಬಹುದು. ಆದರೆ ದೈವಿಕ ಶಕ್ತಿಯ ನಂಬಿಕೆ ಮಾತ್ರ ಒಂದೇ ರೀತಿ ಇದೆ.

ಈ ಜಗತ್ತನ್ನು, ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸಿರುವುದೇ ಆ ದೈವಶಕ್ತಿ. ಈ ಜಗತ್ತು ಮುಂದುವರೆಯುತ್ತಿರುವುದು ಆ ದೈವ ಶಕ್ತಿಯ ಬಲದಿಂದಲೇ. ನಮ್ಮನ್ನೆಲ್ಲ ಆ ದೈವ ಶಕ್ತಿಯೇ ನಿಯಂತ್ರಿಸುತ್ತಿದೆ. ನಮ್ಮ ಬದುಕಿನ ಆಗುಹೋಗುಗಳಿಗೆ, ಕಷ್ಟ ನಷ್ಟಗಳಿಗೆ, ಸುಖ-ದುಃಖಗಳಿಗೆ ಆ ಶಕ್ತಿಯೇ ಕಾರಣ. ನಾವು ಇಲ್ಲಿ ನಿಮಿತ್ತ ಮಾತ್ರ. ಆತನ ಕೃಪೆಯಿಂದಲೇ ನಾವು ಇಂದು ಬದುಕಿದ್ದೇವೆ ಎಂದೇ ದೈವಿಕ ಶಕ್ತಿಯನ್ನು ನಂಬುವ ಎಲ್ಲರ ಭಾವನೆಯಾಗಿದೆ.

ಅದಕ್ಕೆ ವಿರುದ್ಧವಾಗಿ ದೈವಿಕ ಶಕ್ತಿ ಎಂಬುದೇ ಒಂದು ಭ್ರಮೆ, ಕಾಲ್ಪನಿಕ ಮತ್ತು ನಂಬಿಕೆ ಮಾತ್ರ. ವಾಸ್ತವವಲ್ಲ. ಈ ಜಗತ್ತಿನಲ್ಲಿ ಯಾವುದೇ ಅತಿಮಾನುಷ ಶಕ್ತಿಯೂ ಇಲ್ಲ. ಎಲ್ಲವೂ ಈ ಪ್ರಾಕೃತಿಕ ಸೃಷ್ಟಿಯ ನಿಯಮದ ಅಡಿಯಲ್ಲಿಯೇ ನಡೆಯುತ್ತಿದೆ. ಪ್ರಕೃತಿಯೇ ಒಂದು ಜೀವದ್ರವ್ಯ, ಸೃಷ್ಟಿಯ ಮೂಲ. ಅದರ ಶಕ್ತಿಯ ಅಡಿಯಲ್ಲಿಯೇ ನಾವು ಬದುಕುತ್ತಿದ್ದೇವೆ. ಎಲ್ಲವೂ ಒಂದಕ್ಕೊಂದು ಪೂರಕವಾಗಿ ನಮ್ಮ ಅರಿವು, ಅನುಭವದಿಂದಲೇ ಜಗತ್ತು ಬೆಳವಣಿಗೆ ಹೊಂದುತ್ತಾ ಬಂದಿದೆ ಮತ್ತು ಈ ಹಂತ ತಲುಪಿದೆ. ಎಲ್ಲವೂ ಮಾನವ ಶಕ್ತಿಯ ಬಲದಿಂದಲೇ ನಡೆಯುತ್ತಿದೆ.

ಮಾನವೀಯ ಮೌಲ್ಯಗಳೇ ಈ ನಾಗರೀಕ ಸಮಾಜದ ಬಹುದೊಡ್ಡ ಶಕ್ತಿ. ಅದನ್ನು ನಿಯಂತ್ರಿಸಲು ನೀತಿ ನಿಯಮಗಳ ಸಾಂವಿಧಾನಿಕ ಶಕ್ತಿ ಇದೆ. ಈಗ ನಾವು ಅನುಸರಿಸಬೇಕಾಗಿರುವುದು ದೈವಿಕ ಶಕ್ತಿಯನ್ನಲ್ಲ ಮಾನವ ಶಕ್ತಿಯನ್ನು. ಆ ಶಕ್ತಿ ಮೌಲ್ಯಗಳ ದೃಷ್ಟಿಯಲ್ಲಿ ಅಧ:ಪತನದತ್ತ ಸಾಗುತ್ತಿದೆ. ಅದನ್ನು ಸರಿ ಮಾಡಲು ಯಾವ ದೈವಿಕ ಶಕ್ತಿಯಿಂದಲೂ ಸಾಧ್ಯವಿಲ್ಲ. ಮಾನವ ಶಕ್ತಿಯೇ ಜೀವಪರ ನಿಲುವನ್ನು ತಳೆದು ಈ ಎಲ್ಲಾ ವಿಧ್ವಂಸಕ ಕೃತ್ಯಗಳಿಂದ ಹೊರಬಂದು ಮಾನವೀಯ ಮೌಲ್ಯಗಳ ನಾಗರಿಕ ಪ್ರಜ್ಞೆಯೊಂದಿಗೆ ಬದುಕು ರೂಪಿಸಿಕೊಳ್ಳಬೇಕಿದೆ. ಇದೆ ಜನಶಕ್ತಿ ಅಥವಾ ಮಾನವ ಶಕ್ತಿ.

ರಾಮ, ಕೃಷ್ಣ, ಅಲ್ಲಾ, ಬ್ರಹ್ಮ, ವಿಷ್ಣು, ಮಹೇಶ್ವರ, ಮಾರಮ್ಮ, ಕಾಳಮ್ಮ, ದೇವಿ, ದುರ್ಗೆ ಮುಂತಾದ ದೇವರುಗಳು ದೈವಿಕ ಶಕ್ತಿಯ ಸಂಕೇತಗಳಾದರೆ, ಬುದ್ಧ, ಮಹಾವೀರ, ಜೀಸಸ್, ಪೈಗಂಬರ್, ಗುರುನಾನಕ್, ಬಸವಣ್ಣ, ವಿವೇಕಾನಂದ, ಕಾರ್ಲ್ ಮಾರ್ಕ್ಸ್, ಗಾಂಧಿ, ಅಂಬೇಡ್ಕರ್ ಮುಂತಾದವರು
ಜೀವಪರ ನಿಲುವಿನ ಮಾನವ ಶಕ್ತಿಯ ಸಂಕೇತ.

ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ದೈವಶಕ್ತಿ ಮತ್ತು ಜನಶಕ್ತಿ. ಎರಡನ್ನೂ ಸಂಭಾಳಿಸಿಕೊಂಡು ಯಾವುದನ್ನೂ ಅತಿಯಾಗಿ ನಂಬದೇ ವಾಸ್ತವ ನೆಲೆಯಲ್ಲಿ ಜೀವಿಸುವ ಒಂದು ವರ್ಗ.

ದೈವಿಕ ಶಕ್ತಿಯೇ ಪರಮೋಚ್ಚ ಶಕ್ತಿ ಎಂದು ಅದನ್ನೇ ನಂಬಿ ಬದುಕುತ್ತಿರುವ ಇನ್ನೊಂದು ವರ್ಗ.

ಯಾವ ದೈವ ಶಕ್ತಿಯೂ ಇಲ್ಲ. ಜನಶಕ್ತಿಯೇ ನಮ್ಮೆಲ್ಲರ ಶಕ್ತಿ. ಅದೇ ನಮ್ಮ ಸಮಾಜದ ಚಾಲನ ಶಕ್ತಿ ಎಂದು ನಂಬಿರುವ ಮತ್ತೊಂದು ವರ್ಗ.

ವಿಷಯ ಇಷ್ಟು ಸರಳವಾಗಿ ಅರಿವಿನ ಅಂಚಿನಲ್ಲಿಯೇ ಸಾಗುತ್ತಿದ್ದರೆ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಆದರೆ ದೈವಶಕ್ತಿ ಮತ್ತು ಜನಶಕ್ತಿ ಪರಸ್ಪರ ವಿರುದ್ಧ ಮತ್ತು ಸಂಘರ್ಷದಲ್ಲಿ ತೊಡಗಿರುವ ಕಾರಣದಿಂದಲೇ ಸಮಾಜ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೈವಿಕ ಶಕ್ತಿ ಮನುಷ್ಯನಲ್ಲಿ ಅನೇಕ ರೀತಿಯ ವಿಭಜನೆಗೆ, ಶ್ರೇಷ್ಠತೆಯ ವ್ಯಸನಕ್ಕೆ ಕಾರಣವಾಗಿದೆ. ಅನೇಕ ಜನರ ಶೋಷಣೆಗೆ ದೈವಿಕ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅದಕ್ಕೆ ವಿರುದ್ಧವಾಗಿ ಜನಶಕ್ತಿ ಅದನ್ನು ನಿರಾಕರಿಸುತ್ತಿರುವುದರಿಂದ ಘರ್ಷಣೆಗಳು ಪ್ರಾರಂಭವಾಗಿದೆ.

ದೈವಿಕ ಶಕ್ತಿಯ ಅತಿಯಾದ ನಂಬಿಕೆಯ ಕಾರಣದಿಂದಲೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅನೇಕ ಹತ್ಯಾಕಾಂಡಗಳು ನಡೆದಿವೆ ಮತ್ತು ನಡೆಯುತ್ತಿವೆ. ಮನುಷ್ಯ ಶಕ್ತಿಗೂ, ಸಾಂವಿಧಾನಿಕ ಶಕ್ತಿಗೂ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ದೇವರೆಂಬ ಅಗೋಚರ ಶಕ್ತಿ ಮತ್ತು ಮನುಷ್ಯರೆಂಬ ನಮ್ಮ ನಡುವಿನ ಜೊತೆಗಾರ ಶಕ್ತಿ ನಡುವೆ ಸಮನ್ವಯ ಸಾಧ್ಯವೇ ? ಅದು ಆತ್ಮ ವಂಚನೆಯಲ್ಲವೇ? ಅದು ವ್ಯಾವಹಾರಿಕ ನಡೆಯಲ್ಲವೇ? ಅದು ಗುಲಾಮ ಸಂಸ್ಕೃತಿಯ
ಅನುಸರಣೆಯಲ್ಲವೇ ?

ಏಕೆಂದರೆ ನಮ್ಮ ನಡುವಿನ ದೈವಿಕ ಶಕ್ತಿ ಎಂದೂ ನೇರವಾಗಿ ಪ್ರತ್ಯಕ್ಷವಾಗಿಲ್ಲ. ಅದೊಂದು ಅನುಭವ, ತಿಳುವಳಿಕೆ ಅಸಾಧಾರಣ ಶಕ್ತಿ ಎಂಬುದಾಗಿ ಬಿಂಬಿಸಲಾಗಿದೆ. ಅದನ್ನು ಭಯದಿಂದಲೋ, ಭಕ್ತಿಯಿಂದಲೋ ಆಚರಿಸಬೇಕು ಎಂದು ನಂಬಿಸಲಾಗಿದೆ. ಅದರ ಕಾರ್ಯ ವ್ಯಾಪ್ತಿ, ಇರುವಿಕೆ ಸದಾಕಾಲ ಪ್ರಶ್ನೆಗೆ ಒಳಪಡುತ್ತದೆ. ಉತ್ತರ ಸಿಗುತ್ತಿಲ್ಲ. ಈ ಸಮಾಜದ ಎಲ್ಲಾ ಅನ್ಯಾಯ, ಅನೀತಿ ಹತ್ಯಾಕಾಂಡಗಳಿಗೆ ಅದು ನೇರ ಪರಿಹಾರ ಸೂಚಿಸುತ್ತಿಲ್ಲ ಮತ್ತು ನಿಯಂತ್ರಿಸುತ್ತಿಲ್ಲ. ಅದಕ್ಕಾಗಿ ಜನ್ಮ ಪುನರ್ಜನ್ಮದ ನಂಬಿಕೆ, ಸ್ವರ್ಗ ನರಕದ ಕಲ್ಪನೆ ಸೃಷ್ಟಿಸಲಾಗಿದೆ.

ಆದರೆ ಮಾನವ ಶಕ್ತಿ ಮಾತ್ರ ನಮ್ಮ ಕಣ್ಣ ಮುಂದೆಯೇ ಇದೆ. ಅನೇಕ ಮಾನವ ಶಕ್ತಿಯ ಮಹಾ ದಾರ್ಶನಿಕರು ಸುಖ ಸಮೃದ್ಧಿಯ ಬದುಕಿನ ಆಶಯಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ಅದು ಅನುಸರಿಸಲು ಯೋಗ್ಯವೂ ಆಗಿದೆ. ಫಲಿತಾಂಶವೂ ಸಾರ್ವತ್ರಿಕ ಸತ್ಯವಾಗಿ ನಮ್ಮ ಮುಂದಿದೆ. ದೈವಿಕ ಶಕ್ತಿ ಕೇವಲ ಕೆಲವರ ಆಸ್ತಿ ಎಂಬಂತಾಗಿದೆ.

ಆದರೆ ಈ ಕ್ಷಣಕ್ಕೂ ದೈವಿಕ ಶಕ್ತಿಯೇ ಎಲ್ಲಾ ರೀತಿಯಲ್ಲೂ ಮೇಲುಗೈ ಪಡೆದಿದೆ. ಮಾನವ ಶಕ್ತಿಯ ತತ್ವ ಸಿದ್ಧಾಂತಗಳು ಕೇವಲ ತಿಳುವಳಿಕೆಗೆ ಮಾತ್ರ ಸೀಮಿತವಾಗಿದೆ. ನನ್ನ ವೈಯಕ್ತಿಕ ದೃಷ್ಟಿಯಲ್ಲಿ ದೈವಶಕ್ತಿ ಒಂದು ಮಾನಸಿಕ, ತಾತ್ಕಾಲಿಕ, ಕೃತಕ, ಮೌಢ್ಯದ ನಂಬಿಕೆ ಮಾತ್ರ. ಆದರೆ ಮಾನವ ಶಕ್ತಿ ಅರಿವಿನ, ಅನುಭಾವಿಕ ಶಕ್ತಿ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಬದುಕಿನ ನೆಮ್ಮದಿಯ ಗುಣಮಟ್ಟ ಶಾಶ್ವತವಾಗಿ ಹೆಚ್ಚಾಗುತ್ತದೆ.

ಆದರೆ ಅದು ಸಹ ಅಷ್ಟು ಸುಲಭವಲ್ಲ. ಶ್ರಮ ಪಟ್ಟರೆ ಮಾನವ ಶಕ್ತಿಯ ಸದುಪಯೋಗ ಪಡೆದುಕೊಳ್ಳಬಹುದು. ಆದರೆ ಎಷ್ಟೇ ಶ್ರಮ ಪಟ್ಟರು ದೈವಿಕ ಶಕ್ತಿಯನ್ನು ಕಾಣಲು ಸಾಧ್ಯವೇ ಇಲ್ಲ. ಅದು ಸಾಮಾನ್ಯ ಜ್ಞಾನಕ್ಕೆ ನಿಲುಕುವುದೂ ಇಲ್ಲ. ಅಸಾಮಾನ್ಯ ಜ್ಞಾನದಿಂದ ಪ್ರಯೋಜನವು ಇಲ್ಲ. ಮಾನವ ಶಕ್ತಿಯೇ ಅತ್ಯಂತ ಮಹತ್ವದ್ದು ಮತ್ತು ಉಪಯುಕ್ತವಾದದ್ದು. ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!