ದಿನಾಂಕ:10-11-2025(ಹಾಯ್ ಉಡುಪಿ ನ್ಯೂಸ್)
ಮಣಿಪಾಲ: ಈಶ್ವರ ನಗರದ ಸಾರ್ವಜನಿಕ ಸ್ಥಳದಲ್ಲಿ ಮೊನ್ನೆ ರಾತ್ರಿ ನಡೆದ ಜಗಳ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆಪಾದಿತ ನಾಲ್ವರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 08-11-2025 ರಂದು ರಾತ್ರಿ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಈಶ್ವನಗರದ ಬಳಿ ಇರುವ ಡೌನ್ ಟೌನ್ ಬಾರ್ , ರೆಸ್ಟೋರೆಂಟ್ ಎದುರು ಈ ಘಟನೆ ನಡೆದಿದೆ.
ಚಂದನ್, ಅಮರ್ ಶೆಟ್ಟಿ, ಧನುಷ್, ನಿತೇಶ್, ಸುಜನ್ ಹಾಗೂ ನಿನಾದ್ ಅಜಯ್ ಎಂಬ ಯುವಕರು ಬಾರ್ ನಲ್ಲಿ ಊಟ ಮಾಡುತ್ತಿರುವಾಗ, ಚಂದನ್ ನ ಕೈ ಅಮರ್ ಶೆಟ್ಟಿಯ ಮೈಗೆ ತಾಗಿದ ಕಾರಣಕ್ಕೆ ಅವರ ಮಧ್ಯೆ ಜಗಳ ಉಂಟಾಗಿ, ನಂತರ ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಬಗ್ಗೆ ರಾತ್ರಿ ಕರ್ತವ್ಯದಲ್ಲಿದ್ದ ಎ.ಎಸ್.ಐ ಮೋಹನ್ ದಾಸ್ ರವರು ನೀಡಿದ ದೂರಿನ ಮೇರೆಗೆ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ 194(2) ಬಿ.ಎನ್.ಎಸ್ – 2023 ಅಡಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಪೊಲೀಸರು ಆರೋಪಿತರಾದ ಅಮರ್ ಶೆಟ್ಟಿ, ಚಂದನ್ ಸಿ. ಸಾಲ್ಯಾನ್, ಧನುಷ್ ಮತ್ತು ಅಜಯ್ ಎಂಬವರನ್ನು ಬಂಧಿಸಿದ್ದಾರೆ.
