ಬೆಂಗಳೂರು: ದಿನಾಂಕ:14-09-2025(ಹಾಯ್ ಉಡುಪಿ ನ್ಯೂಸ್)
ಡ್ರಗ್ಸ್ ಮುಕ್ತ ಕರ್ನಾಟಕದ ಕನಸಿಗೆ ಹಿನ್ನಡೆ ಉಂಟಾಗಿದ್ದು, ಬೆಂಗಳೂರಿನಲ್ಲಿ ಪೊಲೀಸರೇ ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಮತ್ತು ಜೆ.ಜೆ. ನಗರ ಠಾಣೆಗಳ ಇನ್ಸ್ಪೆಕ್ಟರ್ ಸೇರಿದಂತೆ 11 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ತನಿಖೆಯಲ್ಲಿ, ಆರೋಪಿಗಳು ಡ್ರಗ್ಸ್ ಪೆಡ್ಲರ್ಗಳಿಂದ ಲಂಚ ಪಡೆಯುತ್ತಿದ್ದು, ದಂಧೆಗೆ ಸಹಕರಿಸುತ್ತಿದ್ದರು ಎಂದು ತಿಳಿದುಬಂದಿದೆ.
ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪಣ ತೊಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪದೇ ಪದೆ ಘೋಷಣೆ ಮಾಡುತ್ತಲೇ ಇದ್ದಾರೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ರಾಜಧಾನಿಯ ಪೊಲೀಸರೇ ಡ್ರಗ್ಸ್ ಮಾರಾಟ ದಂಧೆಕೋರರೊಂದಿಗೆ ಶಾಮೀಲಾಗಿರುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ.
ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಕತೆ ಇದು. ಡ್ರಗ್ಸ್ ಮಾರಾಟ ದಂಧೆಗೆ ಕೈ ಜೋಡಿಸಿದ್ದ ಜಗಜೀವನ್ರಾಂ ನಗರ ಹಾಗೂ ಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಸೇರಿ 11 ಮಂದಿ ಪೊಲೀಸರನ್ನು ನಗರ ಪೊಲೀಸ್ ಆಯುಕ್ತರು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಎ. ಮಂಜಣ್ಣ, ಹೆಡ್ ಕಾನ್ಸ್ಟೆಬಲ್ಗಳಾದ ರಮೇಶ್, ಶಿವರಾಜ್, ಕಾನ್ಸ್ಟೆಬಲ್ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್, ಜೆ.ಜೆ. ನಗರ ಠಾಣೆಯ ಎಎಸ್ಐ ಕುಮಾರ್, ಹೆಡ್ ಕಾನ್ಸ್ಟೆಬಲ್ಗಳಾದ ಆನಂದ್, ಬಸವನಗೌಡ, ಮಹೇಶ್ ಅಮಾನತುಗೊಂಡವರು. ಇತ್ತೀಚಿನ ದಿನಗಳಲ್ಲಿ ಒಂದೇ ಸಲ 11 ಮಂದಿ ಪೊಲೀಸರು ಸೇವೆಯಿಂದ ಅಮಾನತುಗೊಂಡಿರುವುದು ಇದೇ ಮೊದಲು.
ಇನ್ಸ್ಪೆಕ್ಟರ್ ಮಂಜಣ್ಣ ಸೇರಿದಂತೆ ಅಮಾನತುಗೊಂಡ 11 ಮಂದಿ ಪೊಲೀಸರು ಕುಖ್ಯಾತ ಡ್ರಗ್ ಪೆಡ್ಲರ್ ಸಲ್ಮಾನ್ನ ಸಿಂಡಿಕೇಟ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಪೆಡ್ಲರ್ಗಳಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ಲಂಚ ಪಡೆಯುತ್ತಿದ್ದರು. ಜತೆಗೆ, ಪೆಡ್ಲರ್ಗಳು ನಡೆಸುವ ಮಾದಕ ಅಂಶವಿರುವ ಡ್ರಗ್ಸ್ ಮಾತ್ರೆಗಳ ಮಾರಾಟಕ್ಕೆ ರಕ್ಷಕರಾಗಿದ್ದರು. ಈ ಮೂಲಕ ಪಶ್ಚಿಮ ವಿಭಾಗದಲ್ಲಿ ಡ್ರಗ್ಸ್ ದಂಧೆ ನಿರಾತಂಕವಾಗಿ ನಡೆಯಲು ಬೆಂಗಾವಲಾಗಿ ನಿಂತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡ್ರಗ್ ಪೆಡ್ಲರ್ ಸಲ್ಮಾನ್ನ ಸಿಂಡಿಕೇಟ್ ನಡೆಸುವ ಡ್ರಗ್ಸ್ ಮಾತ್ರೆ ಹಾಗೂ ಇತರೆ ಮಾದಕ ವಸ್ತುಗಳ ಮಾರಾಟ ದಂಧೆಗೆ ಇನ್ಸ್ಪೆಕ್ಟರ್ ಮಂಜಣ್ಣ ಸ್ವತಃ ಸಹಕಾರ ನೀಡುತ್ತಿದ್ದರು. ಇದಕ್ಕಾಗಿ ದಂಧೆಕೋರರಿಂದ ಲಕ್ಷಾಂತರ ರೂ. ಹಣ ಪಡೆದಿದ್ದು, ಸಂಬಂಧಿಸಿದ ಡಿಜಿಟಲ್ ಪಾವತಿ ಸಾಕ್ಷ್ಯಾಧಾರಗಳು ದೊರೆತಿವೆ. ಅಲ್ಲದೇ ಮಂಜಣ್ಣ ಅವರಿಗೆ ಹಣ ನೀಡುತ್ತಿದ್ದ ವಿಷಯವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಮತ್ತೊಂದೆಡೆ ಚಾಮರಾಜಪೇಟೆ ಹಾಗೂ ಜೆ.ಜೆ.ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಪರಾಧ ವಿಭಾಗದ ಕಾನ್ಸ್ಟೆಬಲ್ಗಳು ಕೂಡ ಸಲ್ಮಾನ್ ತಂಡಕ್ಕೆ ಆತ್ಮೀಯರಾಗಿದ್ದರು. ಪೆಡ್ಲರ್ಗಳಿಂದ ಪ್ರತಿ ತಿಂಗಳು 20 ರಿಂದ 50 ಸಾವಿರ ಹಾಗೂ ಒಂದು ಲಕ್ಷ ರೂ.ಗಳವರೆಗೆ ವಸೂಲಿ ಮಾಡುತ್ತಿದ್ದರು ಎಂಬ ವಿಚಾರ ಇಲಾಖೆಯ ಆಂತರಿಕ ತನಿಖೆಯಲ್ಲಿ ಗೊತ್ತಾಗಿದೆ.
ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಎರಡು ಖಾಸಗಿ ಕಾಲೇಜುಗಳ ಬಳಿ ವಿದ್ಯಾರ್ಥಿಗಳು ನಶೆಯಲ್ಲಿರುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಕುರಿತಂತೆ ಪೊಲೀಸರಿಗೆ ದೂರು ಬಂದಿತ್ತು. ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಿದ ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ನೇತೃತ್ವದ ತಂಡವು ತನಿಖೆ ಚುರುಕುಗೊಳಿಸಿದಾಗ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾತ್ರೆಗಳನ್ನು ಸಲ್ಮಾನ್ ಹಾಗೂ ಸಹಚರರು ಮಾರಾಟ ಮಾಡುತ್ತಿದ್ದ ವಿಚಾರ ಗೊತ್ತಾಗಿತ್ತು.
ಈ ಸಂಬಂಧ ಆರ್.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸಲ್ಮಾನ್ ಅಲಿಯಾಸ್ ಪಾಪ, ಈತನ ಪತ್ನಿ ರೇಷ್ಮಾ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ. ನಗದು ಹಾಗೂ 4 ಲಕ್ಷ ರೂ. ಮೌಲ್ಯದ ಒಂದು ಸಾವಿರ ಡ್ರಗ್ಸ್ ಮಾತ್ರೆಗಳನ್ನು ಜಪ್ತಿ ಮಾಡಿತ್ತು.
ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಚಾಮರಾಜಪೇಟೆ ಇನ್ಸ್ಪೆಕ್ಟರ್ ಮಂಜಣ್ಣ ಹಾಗೂ ಇತರ ಸಿಬ್ಬಂದಿ, ಜೆ.ಜೆ. ನಗರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯ ನೆರವಿನಿಂದ ದಂಧೆ ನಡೆಸುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸಿಪಿ, ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರಿಗೆ ವರದಿ ನೀಡಿದ್ದರು.
ಡ್ರಗ್ಸ್ ಮಾರಾಟದಲ್ಲಿ ಪೊಲೀಸರ ಸಹಕಾರ ಹಾಗೂ ಶಾಮೀಲಿನ ಬಗ್ಗೆ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಅವರಿಗೆ ಡಿಸಿಪಿ ಆದೇಶಿಸಿದ್ದರು.
ಎಸಿಪಿ ಚಂದನ್ ನಡೆಸಿದ ಆಂತರಿಕ ತನಿಖೆಯಲ್ಲಿ ಇನ್ಸ್ಪೆಕ್ಟರ್ ಮಂಜಣ್ಣ ಸೇರಿ 11 ಮಂದಿ ಪೊಲೀಸರು ಡ್ರಗ್ಸ್ ದಂಧೆಗೆ ಸಹಕಾರ ನೀಡಿ ಹಣ ಪಡೆಯುತ್ತಿದ್ದುದು ಸೇರಿದಂತೆ ಗಂಭೀರ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಡಿಸಿಪಿಗೆ ವರದಿ ನೀಡಿದ್ದರು. ಆ ವರದಿ ಅನ್ವಯ 10 ಮಂದಿ ಕಾನ್ಸ್ಟೆಬಲ್ಗಳನ್ನು ಅಮಾನತುಗೊಳಿಸಿ ಡಿಸಿಪಿ ಗಿರೀಶ್ ಆದೇಶ ಹೊರಡಿಸಿದ್ದರು. ಇನ್ಸ್ಪೆಕ್ಟರ್ ಮಂಜಣ್ಣರನ್ನು ಸೇವೆಯಿಂದ ಅಮಾನತುಗೊಳಿಸಿ ಸೆ. 12ರಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಂಬರೀಶ್ ವಿರುದ್ಧವೂ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ದಂಧೆಗೆ ಅವಕಾಶ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಮೃತಹಳ್ಳಿ ಪ್ರದೇಶದ ಸಮಾಜ ಚಿಂತಕರು ಹೆಸರಿನಲ್ಲಿ ಸೆ.4ರಂದು ದೂರು ಸಲ್ಲಿಕೆಯಾಗಿದೆ. ದೂರಿನ ಪ್ರತಿ ಈಗ ವೈರಲ್ ಆಗಿದೆ.
ಇನ್ಸ್ಪೆಕ್ಟರ್ ಅಂಬರೀಶ್ ತಾನು ಸಚಿವರಾದ ಭೈರತಿ ಸುರೇಶ್, ಕೃಷ್ಣಭೈರೇಗೌಡ ಅವರ ಆಪ್ತನೆಂದು ಬಿಂಬಿಸಿಕೊಂಡು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜತೆಗೆ, ಡ್ರಗ್ಸ್ ಪೆಡ್ಲರ್ಗಳಿಂದ ಆಂಧ್ರಪ್ರದೇಶದಿಂದ ಗಾಂಜಾ ತರಿಸಿ ಮಾರಾಟ ಮಾಡಿಸುತ್ತಾರೆ. ಇತ್ತೀಚೆಗೆ ಗಾಂಜಾ ಮಾರಾಟಗಾರರನ್ನು ಬೆದರಿಸಿ 25 ಲಕ್ಷ ರೂ. ವಸೂಲು ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮತ್ತೊಂದೆಡೆ ಕೊಡಿಗೇಹಳ್ಳಿ ಠಾಣೆ ಇನ್ಸ್ಪೆಕ್ಟರ್ ಮುತ್ತುರಾಜ್ ವಿರುದ್ಧ ಸಿವಿಲ್ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಿ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಂತ್ರಸ್ತ ಸಂಜಯ್ ಎಂಬುವವರು ಈಶಾನ್ಯ ವಿಭಾಗದ ಡಿಸಿಪಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
”ನಿವೇಶನವೊಂದರ ವಿಚಾರಕ್ಕೆ ಚೇತನ್ ಎಂಬುವವರ ಜತೆ ಶಾಮೀಲಾಗಿರುವ ಇನ್ಸ್ಪೆಕ್ಟರ್ ಮುತ್ತುರಾಜು, ಸುಳ್ಳು ದಾಖಲೆಗಳ ಅನ್ವಯ ನನ್ನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಕೇಸ್ನ ಪ್ರತಿ ವಿಚಾರವನ್ನು ನನ್ನ ಎದುರಾಳಿ ಚೇತನ್ ಎಂಬುವವರಿಗೆ ಅಪ್ಡೇಟ್ ಮಾಡುತ್ತಿದ್ದರು. ನನ್ನ ಹಾಗೂ ಪತ್ನಿಯ ದೂರವಾಣಿ ಕರೆಗಳ ವಿವರಗಳನ್ನು ಚೇತನ್ಗೆ ನೀಡಿದ್ದರು” ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ನೆರವಾಗುವುದಾಗಿ ಠಾಣಾ ಬರಹಗಾರ ನರಸಿಂಹಮೂರ್ತಿ ಅವರು ಇನ್ಸ್ಪೆಕ್ಟರ್ ಮುತ್ತುರಾಜ್ ಹೆಸರಿನಲ್ಲಿ ನನ್ನ ಸಹೋದರನಿಂದ ಎರಡು ಲಕ್ಷ ರೂ. ಹಣ ಪಡೆದಿದ್ದಾರೆ. ಪ್ರಕರಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ನನ್ನ ವಿರುದ್ಧ ಪೊಲೀಸರು ಹಗೆ ಸಾಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ.
