
ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಏಕಾಏಕಿಯಾಗಿ ತನ್ನನ್ನು ಬದಲಾವಣೆ ಮಾಡಿರುವುದಕ್ಕೆ ಕಿಶೋರ್ ಕುಮಾರ್ ಕುಂದಾಪುರ ಅವರು ಪಕ್ಷದ ಕಾರ್ಯಕ್ರಮದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ನೂತನ ಜಿಲ್ಲಾಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಪಕ್ಷದ ವರಿಷ್ಠರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷ ನನಗೆ ಏನೆಲ್ಲ ಜವಾಬ್ದಾರಿಗಳನ್ನು ಕೊಟ್ಟಿದೆಯೋ ಅದನ್ನು ನಾನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆ. ನಾನು ಪಕ್ಷದ ಹೆಸರಲ್ಲಿ ಯಾರಿಂದಲೂ ಹಣ ವಸೂಲಿ ಮಾಡಿಲ್ಲ. ರಾಜ್ಯ ನಾಯಕರಿಗೆ ಯಾವುದೇ ಸುಳ್ಳು ವರದಿ ಕಳುಹಿಸಿಲ್ಲ. ಆದರೂ ನನ್ನಿಂದ ಏನು ತೊಂದರೆ ಆಗಿದೆ ಎಂದು ಗೊತ್ತಿಲ್ಲ. ನಾನು ಕಾರ್ಯಕರ್ತರ ಮಧ್ಯೆ ಇದ್ದು ಬೆಳೆದು ಬಂದವನು. ಯಾವುದೇ ನಾಯಕರ ಹಿಂಬಾಲಕನಾಗಿ ಇದ್ದುಕೊಂಡು ಬಂದವನಲ್ಲ ಎಂದು ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನಿಂದ ಅಧಿಕಾರವನ್ನು ಕಸಿದುಕೊಂಡಿದ್ದಾರೆ. ನನ್ನಲ್ಲಿ ಅಧಿಕಾರ ಇಲ್ಲದಿರುವಾಗ ಅದನ್ನು ಹಸ್ತಾಂತರ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಅದಕ್ಕಾಗಿ ನಾನು ಅಧಿಕಾರ ಹಸ್ತಾಂತರ ಮಾಡುವುದಿಲ್ಲ. ರಾಜಕಾರಣ ಬಿಟ್ಟು ನಾನು ಹೇಗೆ ಬೆಳೆಯಬೇಕೆಂದು ನನಗೆ ಗೊತ್ತು, ಪಕ್ಷ ನೀಡಿದ ಅವಕಾಶಕ್ಕೆ ಋಣಿಯಾಗಿರುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬಳಿಕ ಸನ್ಮಾನ ಸ್ವೀಕರಿಸದೆ ಪಕ್ಷದ ಶಾಲನ್ನು ವೇದಿಕೆಯಲ್ಲೇ ಬಿಟ್ಟು ಬೇಸರದಿಂದಲೇ ವೇದಿಕೆಯಿಂದ ಹೊರನಡೆದರು.