Spread the love

ಹಿರಿಯಡ್ಕ: ದಿನಾಂಕ:12-06-2025(ಹಾಯ್ ಉಡುಪಿ ನ್ಯೂಸ್) ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ಮಾಂಬೆಟ್ಟು ಎಂಬಲ್ಲಿ ಸರಕಾರದ ಉಚಿತ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಅಕ್ರಮವಾಗಿ ಖರೀದಿಸಿ ದಾಸ್ತಾನು ಇಟ್ಟಿರುವ ಆರೋಪದಲ್ಲಿ ಓರ್ವ ವ್ಯಕ್ತಿ ಯನ್ನು ಹಿರಿಯಡ್ಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ರಭು ಜನರಲ್ ಸ್ಟೋರ್ ನ ವಾಸುದೇವ ಪ್ರಭು (56) ಬಂಧಿತ ಆರೋಪಿಯಾಗಿದ್ದಾನೆ. ಈತನ ಅಂಗಡಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿದ್ದನೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯಂತೆ ಆಹಾರ ನಿರೀಕ್ಷಕರು ಮತ್ತು ಹಿರಿಯಡ್ಕ ಠಾಣೆಯ ಪೊಲೀಸರು ದಾಳಿ ನಡೆಸಿ ಒಟ್ಟು 131 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 1,27,880 ರೂಪಾಯಿ ಮೌಲ್ಯದ ಒಟ್ಟು 55.60 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಯನ್ನು ಬಂಧಿಸಿದ್ದು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!