Spread the love

ದಿನಾಂಕ:08-06-2025(ಹಾಯ್ ಉಡುಪಿ ನ್ಯೂಸ್/
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಳಿಕ, ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರನ್ನು ಹಾಗೂ ಹಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿದ ಸರ್ಕಾರದ ಕ್ರಮವು ನ್ಯಾಯಸಮ್ಮತವಲ್ಲ, ರಾಜಕೀಯ ಒತ್ತಡ ಮತ್ತು ತುರ್ತು ಡ್ಯಾಮೇಜ್ ಕಂಟ್ರೋಲ್‌ನ ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ.
ಈ ದುರಂತಕ್ಕೆ ನಿಖರ ಕಾರಣಗಳೆನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ, ಸರ್ಕಾರ ಪೊಲೀಸ್ ಅಧಿಕಾರಿಗಳ ಮೇಲೆ ಹೊಣೆ ಹಾಕಿ, ತಕ್ಷಣದ ಅಮಾನತು ಆದೇಶ ನೀಡಿದೆ. “ಯಾರದೋ ತಪ್ಪಿಗೆ ಮತ್ತೊಬ್ಬರಿಗೆ ಶಿಕ್ಷೆ ನೀಡುವುದು “ಎತ್ತಿಗೆ ಜ್ವರ ಎಮ್ಮೆಗೆ ಬರೆ” ಎಂಬಂತೆ . ಪೊಲೀಸ್ ಆಯುಕ್ತರನ್ನು ಅಮಾನತು ಮಾಡಿರುವುದು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಅಪರೂಪವಾದ ಘಟನೆ.

“ಸಿದ್ದರಾಮಯ್ಯ ಪ್ಯಾನಿಕ್ ಮೋಡ್‌ಗೆ ಹೋಗಿದ್ದಾರೆ”. ಪೊಲೀಸ್ ಆಯುಕ್ತರು ಮತ್ತು ಅವರ ತಂಡ ರಾತ್ರಿ 3 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಿದ್ದರು. ವಿಜಯೋತ್ಸವಕ್ಕೆ ತೆರೆದ ವಾಹನ ಮೆರವಣಿಗೆಗೆ ಅವರು ಅನುಮತಿ ನೀಡಿರಲಿಲ್ಲ ಎಂಬ ಮಾಹಿತಿ ಇದೆ. ಆದರೆ, ದಿಢೀರ್ ಸರ್ಕಾರದ ತೀರ್ಮಾನಕ್ಕೆ ಅಧಿಕಾರಿಗಳು ಬಲಿಯಾಗಿದ್ದಾರೆ,ಇದು ಪೋಲಿಸ್ ವಲಯದ ಸುದ್ದಿ.
ಈ ವಿಜಯೋತ್ಸವವನ್ನು ಆಯೋಜಿಸುವ ಬಗ್ಗೆ ಮೊದಲಿನಿಂದಲೂ ಸರ್ಕಾರದ ಮಹತ್ವಾಕಾಂಕ್ಷೆ ಸ್ಪಷ್ಟವಾಗಿತ್ತು. ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ, ಸರ್ಕಾರದ ಉನ್ನತ ಮಟ್ಟದಿಂದಲೇ ತುರ್ತು ಸಂಭ್ರಮಾಚರಣೆ, ರೋಡ್ ಶೋ, ಸ್ಟೇಡಿಯಂ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಪೊಲೀಸ್ ಇಲಾಖೆ ಕಾರ್ಯಕ್ರಮವನ್ನು ಜೂನ್ 8ರಂದು ನಡೆಸಲು ಸಲಹೆ ನೀಡಿದ್ದರೂ, ಸರ್ಕಾರ ಮತ್ತು ಆಯೋಜಕರು ಗೆದ್ದ ಮರುದಿನವೇ ಕಾರ್ಯಕ್ರಮ ಹಮ್ಮಿಕೊಳ್ಳಲು ಹಠ ಹಿಡಿದರು. ಈ ತೀರ್ಮಾನದಿಂದಲೇ ಭದ್ರತಾ ಸಿದ್ಧತೆಗಳಿಗೆ ಸಮಯ ಸಿಕ್ಕಿಲ್ಲ, ಜನಸಾಗರವನ್ನು ನಿಯಂತ್ರಿಸುವ ವ್ಯವಸ್ಥೆ ವಿಫಲವಾಯಿತು ಎಂದು ಹೆಚ್ಚಿನ ಮಾಹಿತಿಗಳು ಇದೆ.
ಸರ್ಕಾರದ ಈ ಆತುರ ಮತ್ತು ಪ್ರಚಾರದ ಹಂಬಲವೇ ಈ ದುರಂತಕ್ಕೆ ಮೂಲ ಕಾರಣ ಎಂಬುದು ಬಹುತೇಕ ವಿಶ್ಲೇಷಕರ ಅಭಿಪ್ರಾಯ. “ರಾಜ್ಯ ಸರ್ಕಾರವು ಯಾವುದೇ ಮುಂದಾಲೋಚನೆ ಅಥವಾ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳದೆ ಇಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಅಪಾರ ಅಭಿಮಾನಿ ಬಳಗ ಇರುವ ತಂಡಕ್ಕೆ ಈ ಮಟ್ಟದ ಭದ್ರತಾ ಸಿದ್ಧತೆ ಅಗತ್ಯ ಎಂಬುದು ಎಲ್ಲರಿಗೂ ತಿಳಿದಿದ್ದರೂ, ಸರ್ಕಾರ ನಿರ್ಲಕ್ಷ್ಯ ವಹಿಸಿದೆ,” ಎಂಬ ಆರೋಪಗಳು ಕೇಳಿಬಂದಿವೆ.
ಸರ್ಕಾರಕ್ಕೂ ಆಯೋಜಕರಿಗೂ
ಈ ದುರಂತಕ್ಕೆ ನೇರ ಹೊಣೆಗಾರಿಕೆ ಇದೆ. ಪೊಲೀಸ್ ಇಲಾಖೆಗೆ ಸಮಯ ಮತ್ತು ಸಂಪನ್ಮೂಲಗಳ ಕೊರತೆ – ಈ ಕಾರಣಗಳಿಂದಲೇ ಸಾವಿರಾರು ಅಭಿಮಾನಿಗಳು ಅನಾಹುತಕ್ಕೆ ಒಳಗಾದರು.
ಸರ್ಕಾರ ತನ್ನ ತಪ್ಪನ್ನು ಮರೆಮಾಚಲು, ಸಾರ್ವಜನಿಕ ಆಕ್ರೋಶವನ್ನು ತಣಿಸಲು, ಪೊಲೀಸ್ ಅಧಿಕಾರಿಗಳನ್ನು ಬಲಿ ಕೊಡುವ ಪ್ರಯತ್ನ ಮಾಡಿದೆ .
“ಅಂಧೇರ್ ನಗರಿ, ಚೌಪಟ್ ರಾಜಾ” ಎಂಬಂತೆ, ವಿವೇಕವಿಲ್ಲದ ನಿರ್ಧಾರಗಳು ನಿರಪರಾಧಿ ಅಧಿಕಾರಿಗಳ ಮೇಲೆ ಬೀಳುತ್ತಿವೆ .
ಈ ರೀತಿಯ ಬೆಳವಣಿಗೆಗಳು ಈಗಾಗಲೇ ಸಂಪನ್ಮೂಲ ಕೊರತೆಯಿಂದ ಬಳಲುತ್ತಿರುವ ಪೊಲೀಸ ಇಲಾಖೆಗೆ ಇನ್ನಷ್ಟು ಸಮಸ್ಯೆ ಮಾಡಲಿದೆ.
ತಾನೇ ಮ್ಯಾನ್ ಆಫ್ ದಿ ಮ್ಯಾಚ್ ಎಂಬಂತೆ ಬೀಗಿದ, ಕಪ್ ಹಿಡಿದುಕೊಂಡು ಕಾರಲ್ಲಿ ತಿರುಗಿದ ಡಿಕೆ ಶಿವಕುಮಾರ್ ಅವರ ನಡೆ ಕೂಡ ಹಾಸ್ಯಾಸ್ಪದ..

Dr Pvbhandary, ಮನೋವೈದ್ಯರು ,ಉಡುಪಿ.

error: No Copying!