Spread the love

ಈ ಸಲ ಕಪ್ ನಮ್ದೆ
ಆದ್ರೇನು ಮಾಡ್ಲಿ
ಕೆಲವನ್ನು ಈಗಾಗಲೇ ಕಳೆದುಕೊಂಡು
ಹಲವನ್ನು ಕಳೆದುಕೊಳ್ಳುವ ದಾರಿಯಲ್ಲಿ…
ನಾವು ಮಾತ್ರ ಸೋತಿದ್ದೇವೆ
ಸೋತು ಕಳೆದುಹೋಗಿದ್ದೇವೆ.

ಅದಕು ಇದಕು ಎಲ್ಲದಕೂ
ಬೆಲೆ ಏರಿಕೆಯಾಗಿ
ಮಾನವ ಜೀವದ ಬೆಲೆ ಮಾತ್ರವೇ ಕಡಿಮೆಯಾಗಿ
ನಾವು ಸೋತು ಸುಣ್ಣವಾಗಿದ್ದೇವೆ
ಸಣ್ಣಗಾಗಿದ್ದೇವೆ.

ಭೂರಹಿತರು ಸೂರು ಕಟ್ಟಲೂ ಭೂಮಿ ಇಲ್ಲದೆ ಸೋತಿದ್ದಾರೆ
ಭೂಮಿ ಇದ್ದವರು ಕಾರ್ಪೋರೇಟ್ ಕುಳಗಳ ಸರಕಾರಿ ಕೃಪಾಪೋಷಿತ ಯೋಜನೆಗಳಿಗೆ ಶರಣಾಗಿ
ಇದ್ದುದನ್ನು ಕಳೆದುಕೊಂಡು
ಇನ್ನೊಂದನ್ನು ಖರೀದಿಸಲಾಗದೆ ಸೋತಿದ್ದಾರೆ.

ದಲಿತರು ಮುಸ್ಲೀಮರು ಮಾಂಸಾಹಾರಿಗಳು ಬಾಡಿಗೆ ಮನೆ ಸಿಗದೆ ಸೋತಿದ್ದಾರೆ
ಬಾಡಿಗೆ ಮನೆಯಲ್ಲಿರುವವರು ಮನೆ ಮಾಲಿಕರ ಕಟ್ಟುಪಾಡುಗಳಡಿ ನೊಂದು ಸೋತಿದ್ದಾರೆ ಕೂಲಿಯವರು ಕಾರ್ಮಿಕರು ರೈತರು ಜನವಿರೋಧಿ ಕಾಯ್ದೆಗಳಡಿ ನಲುಗಿ ಸೋತಿದ್ದಾರೆ
ಕಾಡುನಾಶವಾಗಿ ಆಕಾಶದಲ್ಲಿ ವಿಷಹೊಗೆ ಹರಡಿ
ತಾಪಮಾನ ಹೆಚ್ಚಾಗಿ
ಜನರು ಬೆಂದು ಸೋತಿದ್ದಾರೆ.

ಜಾತಿ ದೌರ್ಜನ್ಯ ಅಸ್ಪೃಶ್ಯತೆ ಸಾಮಾಜಿಕ ಬಹಿಷ್ಕಾರದಿಂದ ಬಸವಳಿದು ಸೋತಿದ್ದಾರೆ ಮತಧ್ವೇಷ ಕೋಮುಹಿಂಸೆಗೆ ಅಮಾಯಕರು ಬಲಿಯಾಗಿ ಮಕ್ಕಳು ಹೆತ್ತವರನ್ನು,
ಕೈಹಿಡಿದು ಬಂದಾಕೆ ಸಿಂಧೂರ ಕಳೆದುಕೊಂಡು
ಕಣ್ಣೀರಿನಲ್ಲಿ ಕೈತೊಳೆದೂ ತೊಳೆದು
ಜೀವಂತ ಶವವಾಗಿದ್ದಾಳೆ.

ಬಡತನ ಹಸಿವು ಅವಮಾನ ಅಪಮಾನದಿಂದ ಕೊಟ್ಯಂತರ ಜನ ಸೋತಿದ್ದಾರೆ
ಉದ್ಯೋಗವಿಲ್ಲದೆ, ಚಿಕಿತ್ಸೆಗೆ ಹಣವಿಲ್ಲದೆ
ಲಕ್ಷಾಂತರ ಜನ ಸೋತಿದ್ದಾರೆ.

ಕೆಲವರು ಅಮಾನವೀಯ ಬುಲ್ಡೋಜರ್ ನ್ಯಾಯದಿಂದ ಜೀವಂತ ಸತ್ತಿದ್ದಾರೆ
ಹಲವರು ಕ್ರೌರ್ಯದ ಪರಮಾವಧಿಯಾದ ಎನ್ ಕೌಂಟರ್ ಎಂಬ ಹತ್ಯಾಕಾಂಡದಿಂದ ಹೆಣವಾಗಿದ್ದಾರೆ.

ಆದ್ರೂ ಈ ಸಲ ಕಪ್ ನಮ್ದೆ !

ಕವನ.~.  ಶ್ರೀರಾಮ ದಿವಾಣ, ಉಡುಪಿ

@ 8105749711.

error: No Copying!