Spread the love

ಉಡುಪಿ: ದಿನಾಂಕ:04-06-2025(ಹಾಯ್ ಉಡುಪಿ ನ್ಯೂಸ್) ರಾಜ್ಯ ದಲ್ಲಿ ಸಿಂಗಲ್ ನಂಬರ್ ಲಾಟರಿಯನ್ನು  2006 ರಲ್ಲಿ ಸರ್ಕಾರ ನಿಷೇಧ ಮಾಡಿದ್ದು  ರಾಜ್ಯ ಸರ್ಕಾರದ ವತಿಯಿಂದ ಇದುವರೆಗೆ ಯಾವುದೇ ಲಾಟರಿ ಟಿಕೇಟು ಗಳು ಪುನರಾರಂಭ ಗೊಂಡಿಲ್ಲ. ಬಡವರು ,ಕೂಲಿ ಕಾರ್ಮಿಕರು,ಮಧ್ಯಮ ವರ್ಗದವರು ಹೆಚ್ಚಿನ ಹಣಗಳಿಸುವ ಆಸೆಯಿಂದ ದುಡಿದ ಹಣವನ್ನೆಲ್ಲಾ  ಈ ಲಾಟರಿ ಖರೀದಿಗೆ ಹಾಕಿ ನಷ್ಟ ಹೊಂದುತ್ತಿದ್ದರು, ಅವರ ದುಡಿಮೆಯ ಹಣವನ್ನು ನಂಬಿದ್ದ ಕುಟುಂಬ ಉಪವಾಸ ಇರುವಂತಹ ದುಸ್ಥಿತಿ ಈ ಸಿಂಗಲ್ ನಂಬರ್ ಲಾಟರಿ ಗಳಿಂದ ನಿರ್ಮಾಣವಾಗಿತ್ತು.

ಹಲವಾರು ಜನರು ಈ ಲಾಟರಿ ಚಟದಿಂದ ಸಾಲ ಮಾಡಿ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪಿಡುಗನ್ನು ಹೋಗಲಾಡಿಸಲು ಆಗಿನ ಸರ್ಕಾರ ಲಾಟರಿ ಯನ್ನು ರಾಜ್ಯ ದಲ್ಲಿ ನಿಷೇಧಿಸಿತು. ಸರ್ಕಾರ ಲಾಟರಿ ಟಿಕೇಟುಗಳನ್ನೇನೋ ನಿಷೇಧಿಸಿತು,ಆದರೆ ಅದಕ್ಕೆ ಪರ್ಯಾಯವಾಗಿ ಇದ್ದ ಮಟ್ಕಾ ದಂಧೆ ಯನ್ನು ತಡೆಯಲು ಕಠಿಣ ಕಾನೂನು ರೂಪಿಸದೆ ಮಟ್ಕಾ ದಂಧೆ ಗೆ ಪರೋಕ್ಷ ಬೆಂಬಲ ನೀಡಿತು. ಬಡ ಮತ್ತು ಮಧ್ಯಮ ವರ್ಗದ ಜನರು ದುಡ್ಡಿನ ಆಸೆಗಾಗಿ ಕಾವಲಿಯಿಂದ ಬಾಣಲೆಗೆ ಬಿದ್ದರು ಅಷ್ಟೇ.

ಮಟ್ಕಾ ದಂಧೆಗೆ ರಾಜಕೀಯ ಮರೆತು ಎಲ್ಲಾ ಪಕ್ಷಗಳ ರಾಜಕಾರಣಿಗಳೂ ಬೆಂಗಾವಲಾಗಿ ನಿಂತು ಈ ಮಾಮೂಲಿ ವಿಷಯದಲ್ಲಿ ಮಾತ್ರ ಒಗ್ಗಟ್ಟು ಪ್ರದರ್ಶಿಸುವುದೇ ರಾಜ್ಯದ ರಾಜಕಾರಣಿಗಳ ವಿಶೇಷ. ರಾಜ್ಯಾದ್ಯಂತ ಈ ಅಕ್ರಮ ಮಟ್ಕಾ ದಂಧೆ ಎಗ್ಗಿಲ್ಲದೆ ಸಾಗಿದೆ. ರಾಜಕಾರಣಿಗಳು, ಹೆಚ್ಚಿನ ಪೊಲೀಸ್ ಅಧಿಕಾರಿಗಳು, ಕೆಲವು ಪತ್ರಕರ್ತರು, ಕ್ರಿಮಿನಲ್ಗಳು ಈ ಅಕ್ರಮ ದಂಧೆ ಕೋರರಿಂಧ ಮಾಮೂಲು ಪಡೆದು ಈ ಅಕ್ರಮ ದಂಧೆಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದರೆ ಈ ರಾಜ್ಯದಲ್ಲಿ ಮಟ್ಕಾ ದಂಧೆ ಗೆ ಕೊನೆ ಕಾಣಿಸುವುದು ಕನಸಿನ ಮಾತೇ ಸರಿ.

ಉಡುಪಿ ಜಿಲ್ಲೆಯಲ್ಲೂ  ಈ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಕೆಲವರು ಮಟ್ಕಾ ದೊರೆಗಳು ಇಲ್ಲಿಯ ದೋ ನಂಬರ್ ದಂಧೆಯನ್ನು ಎಗ್ಗಿಲ್ಲದೆ ನಡೆಸುತ್ತಿದ್ದಾರೆ.ಇವರಿಗೆ ಎಲ್ಲಾ ಪಕ್ಷಗಳ ರಾಜಕಾರಣಿಗಳ, ಪೊಲೀಸ್ ಅಧಿಕಾರಿಗಳ ಬೆಂಬಲದಿಂದಲೇ ಇಷ್ಟೂ ವರ್ಷಗಳಿಂದ ಮಟ್ಕಾ ದಂಧೆ ಕೊನೆ ಇಲ್ಲದೆ ಸಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೂ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಅಧಿಕಾರವಹಿಸಿಕೊಂಡ ಅದಷ್ಟೂ ಅಧಿಕಾರಿಗಳು ಈ ಮಟ್ಕಾ ದಂಧೆ ನಿಯಂತ್ರಿಸಲು ಅದೇಕೋ ಕಾರಣಾಂತರಗಳಿಂದ ವಿಫಲರಾಗಿದ್ದಾರೆ. ಅಣ್ಣಾ ಮಲೈಯವರು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಮಾತ್ರ ಮಟ್ಕಾ ದಂಧೆ ಕೋರರಿಗೆ ಸ್ವಲ್ಪ ಮಟ್ಟಿನ ಚಳಿ ಬಿಡಿಸುವಲ್ಲಿ ಸಫಲರಾಗಿದ್ದರು. ಅವರ ನಂತರ ಬಂದ ಅಧಿಕಾರಿಗಳು ಅದೇಕೋ ಈ ವಿಷಯದ ಗೋಜಿಗೆ ಹೋಗಲಿಲ್ಲ.

ಆದರೆ ಇದೀಗ ಉಡುಪಿ ಜಿಲ್ಲೆಗೆ ವರ್ಗವಾಗಿ ಬಂದಿರುವ ನೂತನ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿ ರಾಂ ಶಂಕರ್ ಅವರು ಬಂದ ಮೊದಲಿಗೇ ಮಟ್ಕಾ ದಂಧೆಯ ಹುತ್ತಕ್ಕೇ ಕೈ ಹಾಕಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯ ಜನರಲ್ಲಿ ಇವರ ಬಗ್ಗೆ ಹೊಸ ವಿಶ್ವಾಸ ಮೂಡುವಂತಾಗಿದೆ. ಆದರೆ ಈ ವಿಶ್ವಾಸ ವನ್ನು ಉಳಿಸಿ ಕೊಳ್ಳಲು ನೂತನ ಎಸ್ಪಿ ಯವರು ಸಫಲರಾಗುವರೋ? ಈ ಜಿಲ್ಲೆಯ ಕೆಲವು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಇವರನ್ನು ಕರ್ತವ್ಯ ನಿರ್ವಹಿಸಲು ಬಿಡುವರೋ ಎಂಬುದು ಯಕ್ಷಪ್ರಶ್ನೆ ಯಾಗಿದೆ.

ನೂತನ ಎಸ್ಪಿ ಯವರು ಯಾವುದೇ ಪ್ರಭಾವಕ್ಕೆ ಜಗ್ಗದೆ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಬಲಪಡಿಸುವ ಮೂಲಕ ಎಲ್ಲಾ ವರ್ಗದವರಿಗೂ ಸಮಾನ ನ್ಯಾಯವನ್ನು ದೊರಕಿಸಿ ಕೊಡುವ ಮೂಲಕ ಈ ಜಿಲ್ಲೆಯ ಇತಿಹಾಸದಲ್ಲಿ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಮೂಡಿಸುವಲ್ಲಿ ಸಫಲರಾಗುವರೋ ಕಾದುನೋಡ ಬೇಕಾಗಿದೆ. ಅವರ ಉತ್ತಮ, ಜನಸ್ನೇಹಿ ಕೆಲಸಗಳಿಗೆ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.

error: No Copying!