
ಉಡುಪಿ: ದಿನಾಂಕ:24-02-2025( ಹಾಯ್ ಉಡುಪಿ ನ್ಯೂಸ್) ನಗರದ ಚಂದು ಮೈದಾನದಲ್ಲಿರುವ ಡಿಎಆರ್ ಪೊಲೀಸ್ ವಸತಿ ಗೃಹಕ್ಕೆ ಸೋಮವಾರ ನಸುಕಿನ ವೇಳೆ ನುಗ್ಗಿದ ಕಳ್ಳರು ಕೆಲವು ಸೊತ್ತುಗಳನ್ನು ಕಳವು ಮಾಡಿದ್ದಾರೆ
ಚಂದು ಮೈದಾನದಲ್ಲಿರುವ ಮೂರು ವಸತಿ ಸಮುಚ್ಚಯದಲ್ಲಿ ಒಟ್ಟು 28 ಮನೆಗಳಿದ್ದು, ಇದರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ರಾಘವೇಂದ್ರ ಹಾಗೂ ರವಿರಾಜ್ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಕಪಾಟಿನ ಬೀಗ ಮುರಿದು ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎನ್ನಲಾಗಿದೆ.
ರಾಘವೇಂದ್ರ ಎಂಬವರು ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದು, ಅವರ ಮನೆಯಲ್ಲಿ ಯಾರು ಇರಲಿಲ್ಲ. ಅದೇ ರೀತಿ ರವಿರಾಜ್ ಎಂಬವರು ಫೆ.23ರಂದು ತಡರಾತ್ರಿ ಮನೆಗೆ ಬೀಗ ಹಾಕಿ ಕರ್ತವ್ಯಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ರಾಘವೇಂದ್ರ ಅವರ ಮನೆಯಲ್ಲಿದ್ದ ಬೆಳ್ಳಿಯ ಕಾಲುಗೆಜ್ಜೆ ಹಾಗೂ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ .ಗೊದ್ರೆಜ್ ಕಪಾಟಿನ ಬೀಗವನ್ನು ಮುರಿದು ಅದರೊಳಗೆ ಇದ್ದ ಬಟ್ಟೆ ಬರೆ ಗಳನ್ನು ಚೆಲ್ಲಾಪಿಲ್ಲಿ ಮಾಡಿ ಸುಮಾರು 30 ಗ್ರಾಮ ತೂಕದ ಬೆಳ್ಳಿಯ ಕಾಲ್ಗೆಜ್ಜೆ ಅಂದಾಜು ಮೌಲ್ಯ 15000/- ರೂ ಮತ್ತು ಸುಮಾರು 1000/-ರೂ ನಾಣ್ಯ ತುಂಬಿದ ಡಬ್ಬಿ (ಒಟ್ಟು ಅಂದಾಜು ಮೌಲ್ಯ 16000/-) ಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ .
ರವಿರಾಜ್ ಮನೆಯಲ್ಲಿ ಯಾವುದೇ ಸೊತ್ತುಗಳು ಕಳವಾಗಿಲ್ಲ ಎನ್ನಲಾಗಿದೆ.
ಸ್ಥಳದಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 331(3),331(4),305 BNS ನಂತೆ ಪ್ರಕರಣ ದಾಖಲಾಗಿರುತ್ತದೆ.