ಒಮ್ಮೊಮ್ಮೆ ಸಂತಸ ಉಕ್ಕಿ ಹರಿಯುತ್ತದೆ,
ಇನ್ನೊಮ್ಮೆ ದುಃಖದ ಕಟ್ಟೆ ಒಡೆಯುತ್ತದೆ,
ಮತ್ತೊಮ್ಮೆ ಉತ್ಸಾಹ ಚಿಮ್ಮುತ್ತದೆ,
ಮಗದೊಮ್ಮೆ ನಿರಾಸೆ ಕಾಡುತ್ತದೆ,
ಆಗೊಮ್ಮೆ ಸಾಧಿಸುವ ಛಲ ಮೂಡುತ್ತದೆ,
ಈಗೊಮ್ಮೆ ವಿಫಲತೆಯ ಭಯವಾಗುತ್ತದೆ.
ಅಲ್ಲೊಮ್ಮೆ ಭರವಸೆಯ ಗೆರೆ ಕಾಣುತ್ತದೆ,
ಇಲ್ಲೊಮ್ಮೆ ಆ ಸಾಧ್ಯತೆಯೇ ಕ್ಷೀಣಿಸುತ್ತದೆ,
ಮುಂದೊಮ್ಮೆ ಭವ್ಯ ಭವಿಷ್ಯದ ಕನಸು ಕಟ್ಟುತ್ತದೆ,
ಹಿಂದೊಮ್ಮೆ ಪ್ರಪಾತಕ್ಕೆ ಬಿದ್ದ ನೆನಪುಗಳು ತಟ್ಟುತ್ತವೆ,
ಎಲ್ಲೋ ಒಮ್ಮೆ ಆಕ್ರೋಶ ಘರ್ಜಿಸುತ್ತದೆ,
ಎಂದೋ ಒಮ್ಮೆ ತಾಳ್ಮೆ ಮೆರೆಯುತ್ತದೆ,
ಮೇಲೊಮ್ಮೆ ಮನಸ್ಸು ವಿಹರಿಸುತ್ತದೆ,
ಕೆಳಗೊಮ್ಮೆ ಹೃದಯ ಬಿರಿಯುತ್ತದೆ….
ಮನವೆಂಬ ಮರ್ಕಟವ ಬಲ್ಲವರಾರು,
ಹಾಗೋ ಹೀಗೋ ಹೇಗೇಗೋ,
ಆಡುತ್ತಾ ಆಡಿಸುತ್ತಾ ಸಾಗುತ್ತದೆ,
ಅದುವೇ ಬದುಕು – ಇದುವೇ ಜೀವನ….
ಎಷ್ಟೊಂದು ಸಣ್ಣವನು ನಾನು, ಎಷ್ಟೊಂದು ಅಲ್ಪನು ನಾನು,
ಕ್ಷುಲ್ಲುಕ ದೇಹ, ದುರ್ಬಲ ಮನಸ್ಸು,
ಸಣ್ಣ ಸೂಜಿ ಚುಚ್ಚಿದರೂ ರಕ್ತ ಚಿಮ್ಮುತ್ತದೆ,
ಸಣ್ಣ ಕೋಲಿನಿಂದ ಹೊಡೆದರೆ ಬಾಸುಂಡೆ ಬರುತ್ತದೆ,
ಸ್ವಲ್ಪ ಮೇಲಿಂದ ಬಿದ್ದರೆ ಪ್ರಾಣವೇ ಹೋಗುತ್ತದೆ,
ಮಳೆಯಲ್ಲಿ ನೆನೆದರೆ ನೆಗಡಿಯಾಗುತ್ತದೆ,
ಬಿಸಿಲಲ್ಲಿ ನಡೆದರೆ ತಲೆ ನೋವಾಗುತ್ತದೆ,
ಚಳಿಯಲ್ಲಿದ್ದರೆ ಉಬ್ಬಸವಾಗುತ್ತದೆ,
ಗಾಳಿಯಲ್ಲಿ ಸಿಕ್ಕಿದರೆ ಜ್ವರ ಬರುತ್ತದೆ,
ಯಾರಾದರೂ ಟೀಕಿಸಿದರೆ ಕೋಪ ಬರುತ್ತದೆ,
ಇನ್ಯಾರಾದರೂ ಹಂಗಿಸಿದರೆ ಬೇಸರವಾಗುತ್ತದೆ,
ಸ್ಪರ್ಧೆಯಲ್ಲಿ ಸೋತರೆ ಅವಮಾನವಾಗುತ್ತದೆ,
ಪ್ರೀತಿ ಪಾತ್ರರು ಸತ್ತರೆ ದು:ಖವಾಗುತ್ತದೆ,
ಮತ್ಯಾರೋ ಮೋಸ ಮಾಡಿದರೆ ನೋವಾಗುತ್ತದೆ,
ಹಣ ಸಿಕ್ಕಿದರೆ ಖುಷಿಯಾಗುತ್ತದೆ,
ಅಧಿಕಾರ ಸಿಕ್ಕಿದರೆ ಗರ್ವವಾಗುತ್ತದೆ,
ಬೇರೆಯವರ ಯಶಸ್ಸಿಗೆ ಹೊಟ್ಟೆ ಉರಿಯುತ್ತದೆ,
ನನ್ನ ಪರಿಸ್ಥಿತಿಗೆ ನಾಚಿಕೆಯಾಗುತ್ತದೆ,
ಪರರ ವಸ್ತುಗಳ ಮೇಲೆ ಆಸೆಯಾಗುತ್ತದೆ,
ಪರ ಸತಿ/ಪತಿ ಮೇಲೆ ಮೋಹವಾಗುತ್ತದೆ,
ನನಗಿಷ್ಟವಿಲ್ಲದವರು ಸೋತರೆ ಸಂತೋಷವಾಗುತ್ತದೆ,
ಎಲ್ಲರೂ ಹೇಳುತ್ತಾರೆ,
ಕಾಮ ಕ್ರೋದ ಲೋಭ ಮೋಹ ಮದ ಮತ್ಸರಗಳೆಂಬ ಅರಿಷಡ್ವರ್ಗಗಳನ್ನು
ಗೆದ್ದವನೇ ಮನುಷ್ಯನೆನ್ನುವರು, ನಾಗರಿಕನೆನ್ನುವರು,
ಅದನ್ನು ಗೆಲ್ಲುವುದು ಹೇಗೆ….
ಗೆಲ್ಲುವುದು ಎಂದು……..
ನಿಯಂತ್ರಣ ಸಾಧಿಸುವುದು ಯಾವಾಗ…..
ಹಾಗಾದರೆ ನಾನಿನ್ನೂ ಮನುಷ್ಯನಲ್ಲವೇ….
ನಾನಿನ್ನೂ ನಾಗರಿಕನಲ್ಲವೇ….
ಯೋಚಿಸುತ್ತಲೇ ಇದ್ದೇನೆ…..
ನಮ್ಮ ಬಾಳ ಪಯಣ ನಿರಂತರ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
