ಕುಂದಾಪುರ : ದಿನಾಂಕ:20-05-2026(ಹಾಯ್ ಉಡುಪಿ ನ್ಯೂಸ್) ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನಗಳ್ಳಿ ಕೆಂಪಣ್ಣ ತೊಪ್ಲು ಪ್ರದೇಶದಲ್ಲಿ ನಾಲ್ಕು ಪರಿಶಿಷ್ಟ ಜಾತಿಯ ಕುಟುಂಬಗಳು ವಾರಾಹಿ ನದಿ ದಡದಲ್ಲಿ ವಾಸವಾಗಿದ್ದಾರೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ವಾರಾಹಿ ನದಿಯ ರಭಸದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಈ ನಾಲ್ಕು ಬಡ ಕುಟುಂಬಗಳು ದಿನ ಕಳೆಯುವಂತಾಗಿದೆ.
ಇಲ್ಲಿ ಕಾಂಕ್ರೀಟ್ ತಡೆ ಗೋಡೆ ಯನ್ನು ನಿರ್ಮಾಣ ಮಾಡುವ ಮೂಲಕ ಮನೆಗಳು ಕುಸಿಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕೆಲವು ವರ್ಷಗಳಿಂದ ಈ ಬಡ ಕುಟುಂಬಗಳು ಆನಗಳ್ಳಿ ಗ್ರಾಮ ಪಂಚಾಯತಿ ಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಆನಗಳ್ಳಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸುಮಾರು 15 ಲಕ್ಷ ಅಂದಾಜು ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡ ಬೇಕಾಗಿದ್ದು ಇಷ್ಟೊಂದು ದೊಡ್ಡ ಮೊತ್ತದ ಹೊಂದಾಣಿಕೆ ಪಂಚಾಯತ್ ನಿಂದ ಹೊಂದಿಸಲು ಸಾಧ್ಯವಿಲ್ಲ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಮುಂದಿನ ಕ್ರಮಕ್ಕಾಗಿ ಸಮಾಜಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದಾರೆ.
ಮಳೆಗಾಲ ಪ್ರಾರಂಭವಾಗಿದೆ ಆದಷ್ಟು ಶೀಘ್ರ ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಮನೆಗಳು ನದಿ ನೀರಿನಲ್ಲಿ ಕೊಚ್ಚಿ ಹೋಗುವ ಮೊದಲು ಸ್ಥಳಕ್ಕೆ ಭೇಟಿ ನೀಡಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ.
