kannadaprabha_2026-05-09_s14nqh5l_newindianexpress2026-05-09wsudjtwgPTI05092026000477A.jpeg
Spread the love

ದಿನಾಂಕ:09-05-2026(ಹಾಯ್ ಉಡುಪಿ ನ್ಯೂಸ್)

ಚೆನ್ನೈ: ತಮಿಳುನಾಡಿನಲ್ಲಿ ಐದು ದಿನಗಳ ರಾಜಕೀಯ ಹೈಡ್ರಾಮಕ್ಕೆ ಶನಿವಾರ ಸಂಜೆ ಕೊನೆಗೂ ತೆರೆ ಬಿದ್ದಿದ್ದು, ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಭಾನುವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.

ದಳಪತಿ ವಿಜಯ್ ಅವರು ಇಂದು ಸಂಜೆ ನಾಲ್ಕನೇ ಬಾರಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಹಿರಿಯ ಟಿವಿಕೆ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ವಿಜಯ್​​, 120 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದ್ದರು.

ದಳಪತಿ ವಿಜಯ್ ನೀಡಿದ ಸಂಖ್ಯೆಯಿಂದ ತೃಪ್ತರಾದ ರಾಜ್ಯಪಾಲರು ಕೊನೆಗೂ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಅಲ್ಲದೆ ಮೇ 13 ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು, ವಿಜಯ್ ಅವರಿಗೆ ಸೂಚಿಸಿದ್ದಾರೆ ಎಂದು ತಮಿಳುನಾಡು ಲೋಕಭವನ ತಿಳಿಸಿದೆ.

ಏಪ್ರಿಲ್ 23 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ, ಸರ್ಕಾರ ರಚಿಸಲು ಡಿಎಂಕೆ ಮಿತ್ರಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಅವರ ಬೆಂಬಲವನ್ನು ಕೋರಿತ್ತು.

ಕಾಂಗ್ರೆಸ್‌ನ ಐದು ಶಾಸಕರು ಹಾಗೂ ಎಡಪಂಥೀಯ ಪಕ್ಷಗಳ ನಾಲ್ವರು ಶಾಸಕರೂ ಸೇರಿದಂತೆ ವಿಜಯ್ ನೇತೃತ್ವದ ಮೈತ್ರಿಗೆ ಈಗಾಗಲೇ 116 ಶಾಸಕರ ಬೆಂಬಲವಿತ್ತು. ಇದೀಗ ವಿಸಿಕೆಯ ಇಬ್ಬರು ಹಾಗೂ ಐಯುಎಂಎಲ್ ನ ಇಬ್ಬರು ಶಾಸಕರ ಬೆಂಬಲ ಸಿಕ್ಕಿದ್ದರಿಂದ ಮೈತ್ರಿಯ ಬಲ 120ಕ್ಕೆ ಹೆಚ್ಚಿದೆ.

ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್​ ಪ್ರಮಾಣ

ನಾಳೆ ಬೆಳಗ್ಗೆ 10 ಗಂಟೆಗೆ ಚೆನ್ನೈನ ನೆಹರು ಮೈದಾನದಲ್ಲಿ ದಳಪತಿ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಜಯ್ ಜೊತೆ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

error: No Copying!