” ಜಗತ್ತಿನ ಎಲ್ಲಾ ಶೋಷಿತರು – ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು “……
ಚೆಗುವಾರ…………
ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ….
ಎಲ್ಲರಿಗೂ ಶುಭಾಶಯಗಳು……..
ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳು ಸಹ ನೆನಪಾಗಲಿ………
ಚುಮು ಚುಮು ಚಳಿಯಲ್ಲಿ ನಿಮಗೆ ನಿಮ್ಮ ಪ್ರೇಯಸಿ/ ಪ್ರಿಯಕರ ನೆನಪಾದರೆ ಸಂತೋಷಿಸುವೆವು.
ಹಾಗೆಯೇ,
ಹಿಮಾಲಯದ ತಪ್ಪಲಿನಲ್ಲಿ ಆ ನಡುಗುವ ಚಳಿಯಲ್ಲಿ ನಮಗಾಗಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರೂ ನೆನಪಾಗಲಿ ಎಂದು ಆಶಿಸುವೆ …….
ಅತ್ಯಂತ ತೀವ್ರ ಉಷ್ಣ ತಾಪಮಾನದಲ್ಲಿ ಅನಿರೀಕ್ಷಿತವಾಗಿ ತಣ್ಣನೆಯ ನೀರ ಮಜ್ಜಿಗೆ ಮತ್ತು ಎಳನೀರು ದೊರೆತು ಅದು ಗಂಟಲಲ್ಲಿ ಇಳಿಯುವಾಗ ಆಸ್ವಾದಿಸುವ ನಿಮ್ಮ ಮನಸ್ಥಿತಿಗೆ ಸಂತೋಷಪಡುವೆವು, ಆದರೆ ಅದೇ ಸಮಯದಲ್ಲಿ ಅದು ತಯಾರಾಗಲು ಬೆವರು ಸುರಿಸಿದ ರೈತರು ನೆನಪಾಗಲಿ ಎಂದು ಆಶಿಸುವೆ……
ಮೋಡ ಬಿರಿದಂತೆ ಸುರಿಯುವ ಮಳೆ ಮತ್ತು ಗಡಗಡ ನಡುಗುವ ಚಳಿಯಲ್ಲಿ ಬೆಚ್ಚಗಿನ ಹೊದಿಕೆ – ಆಶ್ರಯ ನಿಮಗೆ ಸಿಕ್ಕರೆ ಸಂತೋಷಿಸುವೆವು,
ಹಾಗೆಯೇ,
ಬೀದಿ ಬದಿಯಲ್ಲಿ ಹೊದಿಕೆ ಇಲ್ಲದೆ ಚಳಿಗೆ ವಿಲವಿಲ ಒದ್ದಾಡುತ್ತಾ ಮಲಗಿರುವ ಅನಾಥ ನಿರ್ಗತಿಕ ಜನರೂ ನೆನಪಾಗಲಿ ಎಂದು ಆಶಿಸುವೆ ………
ಮಾಗಿಯ ಚಳಿಗೆ ನಿಮಗೆ ಬಿಸಿಬಿಸಿ ಕಾಫಿ/ಟೀ ಸಿಕ್ಕರೆ ಸಂತೋಷಿಸುವೆವು.
ಹಾಗೆಯೇ,
ಸುರಿಯುವ ಮಂಜಿನಲ್ಲಿ ಕಾಫಿ/ಟೀ ತೋಟಗಳಲ್ಲಿ ಕೆಲಸ ಮಾಡುವ ಆ ಕೂಲಿ ಕಾರ್ಮಿಕರ ಸ್ಥಿತಿಯೂ ನಿಮಗೆ ನೆನಪಾಗಲಿ ಎಂದು ಆಶಿಸುವೆ …………
ಹಿಮದ ರಾಶಿಯ ನಡುವೆ ಗರಿಗರಿ ಸುಟ್ಟ ಕೋಳಿ ಮಾಂಸದ ಜೊತೆಗೆ ರಮ್/ವಿಸ್ಕಿ ನಿಮಗೆ ಸಿಕ್ಜರೆ ಸಂತೋಷಿಸುವೆವು.
ಹಾಗೆಯೇ,
ಬೆಳಗಿನ ಅದುರುವ ಚಳಿಯಲ್ಲಿ ಹೊಲ ಉಳುವ ರೈತನೂ ನಿಮಗೆ ನೆನಪಾಗಲಿ ಎಂದು ಆಶಿಸುವೆ…………..
ತಲೆಯಿಂದ ಪಾದದವರೆಗೂ ಬೆಚ್ಚನೆ ಹೊದ್ದು ಮನೆಯ ಬಾಲ್ಕನಿಯಲ್ಲಿ ಕಾಲಮೇಲೆ ಕಾಲುಹಾಕಿ ಕುಳಿತು ಬಿಸಿಬಿಸಿ ಬೆಣ್ಣೆ ದೋಸೆ / ತುಪ್ಪದ ಉಪ್ಪಿಟ್ಟು ತಿನ್ನುತ್ತಾ ಪತ್ರಿಕೆ ಓದುವ ಸುಖ ನಿಮ್ಮದಾದರೆ ಸಂತೋಷಿಸುವೆವು.
ಹಾಗೆಯೇ,
ಹತ್ತರ ಪುಟ್ಟ ಹುಡುಗನೊಬ್ಬ ಆ ಭಯಂಕರ ಚಳಿಯಲ್ಲಿ ಚಡ್ಡಿಹಾಕಿಕೊಂಡು ಬೆಳಗ್ಗೆ 4ಕ್ಕೆ ಎದ್ದು ಮನೆಮನೆಗೆ ಪತ್ರಿಕೆ ಹಾಕುವ ಕಷ್ಟ ನೆನಪಾಗಲಿ ಎಂದು ಆಶಿಸುವೆ……………..
ನಿಮ್ಮ ಸುಖಕ್ಕೆ ಹೊಟ್ಟೆ ಉರಿ ಪಡಲಾರೆವು.
ಆದರೆ ಆ ಶ್ರಮಜೀವಿಗಳ ಸಂಕಷ್ಷಗಳಿಗೆ ಮರುಕವಿದೆ/ ಸಹಾನುಭೂತಿಯಿದೆ.
ಅವರೂ ಶ್ರಮಪಡಲಿ. ಆದರೆ ಅವರ ನೋವು ಕಷ್ಟದ ಪ್ರಮಾಣ ಕಡಿಮೆಯಾಗಿ ಅವರ ಜೀವನಮಟ್ಟ ಸುಧಾರಣೆಯಾಗಿ ಅವರೂ ನೆಮ್ಮದಿ ಬದುಕು ಕಾಣುವಂತಾಗಲಿ ಎಂದು ಆಶಿಸುತ್ತಾ ……………….
ಶ್ರಮಿಕರ ಎದೆಯ ಮೇಲಿನ ಬೆವರ ಹನಿಗಳು……………
ಇಂಗ್ಲೇಂಡಿನ ಮ್ಯಾಂಚೆಸ್ಟರ್ ನ ಬಟ್ಟೆ ಗಿರಣಿಗಳು,
ದಕ್ಷಿಣ ಆಫ್ರಿಕಾದ ಚಿನ್ನದ ಗಣಿಗಳು,
ಚೀನಾದ ಕಬ್ಬಿಣದ ಅದಿರ ಗಣಿಗಳು,
ಅರೇಬಿಯನ್ ಮರುಭೂಮಿಯ ಕೂಲಿಗಳು,
ಬ್ರೆಜಿಲ್ ಕಾಫಿ ತೋಟದ ಕಾರ್ಮಿಕರು,
ಸುಡಾನ್, ಇಥಿಯೋಪಿಯಾದ ಗುಲಾಮರು,
ಇಟಲಿಯ ಕ್ವಾರಿಯ ಕಲ್ಲುಗಣಿ ಶ್ರಮಿಕರು,
ಅಮೆರಿಕದ ಹಾಲಿವುಡ್ನ ಸಿನೆಮಾ ಕೆಲಸಗಾರರು,
ಹಾಂಕಾಂಗ್ ನ ಹೋಟೆಲ್ ಕಾರ್ಮಿಕರು,
ಆಸ್ಟ್ರೇಲಿಯಾ ದ್ವೀಪಗಳ ಮೀನುಗಾರರು,
ಬಾಂಗ್ಲಾದೇಶದ ಬಿರು ಬಿಸಿಲಿನಲ್ಲಿ ನಡೆದಾಡುವ ಟಾಂಗಾವಾಲಾಗಳು,
ಟಿಬೆಟ್ಟಿನ ದುರ್ಗಮ ರಸ್ತೆಗಳಲ್ಲಿ ವಾಹನ ಚಲಾಯಿಸುವ ಚಾಲಕರು,
ಸಿರಿಯಾದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರು,
ಉತ್ತರ ಕೊರಿಯಾದ ಸರ್ವಾಧಿಕಾರಕ್ಕೆ ನಲುಗಿ ಉಸಿರಾಡಲು ಕಷ್ಟ ಪಡುತ್ತಿರುವ ಸ್ವತಂತ್ರ ಜೀವಿಗಳು,
ಭಾರತದ ಮ್ಯಾನ್ ಹೋಲ್ ಗಳಲ್ಲಿ ಕೆಲಸ ಮಾಡುವ ನನ್ನದೇ ಅಣ್ಣ ತಮ್ಮಂದಿರು,
ಮುಂಬಯಿನ ರೈಲ್ವೆ ಕೂಲಿಗಳು,
ಸೂರತ್ ನ ಬಟ್ಟೆ ಗಿರಣಿಗಳ ಕೆಲಸಗಾರರು,
ವಿಶಾಖಪಟ್ಟಣದ ಮೀನುಗಾರರು,
ಕೊಯಮತ್ತೂರಿನ ಪಟಾಕಿ ತಯಾರಕರು,
ಮಂಗಳೂರಿನ ಬೀಡಿ ಕಟ್ಟುವವರು,
ಕೇರಳದ ಚಹಾ ತೋಟದ ದಿನಗೂಲಿಗಳು,
ದೆಹಲಿಯ ಕಟ್ಟಡ ಕಾರ್ಮಿಕರು,
ಜೈಪುರದ ಕಲ್ಲು ಬಂಡೆ ಹೊಡೆಯುವವರು,
ಇಳಕಲ್ ನ ಸೀರೆ ನೇಯುವವರು,
ಹೋಸಕೋಟೆಯ ಇಟ್ಟಿಗೆ ಕಾರ್ಮಿಕರು,
ಲಕ್ನೋ ಬಸ್ ನಿಲ್ದಾಣದ ಕಸ ಗುಡಿಸುವವರು,
ಅಸ್ಸಾಂನ ನಿರಾಶ್ರಿತರು,
ಮಣಿಪುರದ ಕ್ಷೌರಿಕರು,
ಭುವನೇಶ್ವರದ ಬಟ್ಟೆ ತೊಳೆಯುವವರು,
ಹೀಗೆ ಸಾಕಷ್ಟು ಶ್ರಮ ಜೀವಿಗಳು ನೆನಪಾಗುತ್ತಾರೆ…..
ನೆನಪಿರಲಿ,
ಜಗತ್ತಿನ ಪ್ರತಿ ಜೀವಿಯೂ ಕಾರ್ಮಿಕನೇ….…….
ಶ್ರೀಮಂತ ರಾಷ್ಟ್ರ ಕತಾರ್,
ಬಲಿಷ್ಠ ರಾಷ್ಟ್ರ ಅಮೆರಿಕ,
ಬಡ ರಾಷ್ಟ್ರ ಇಥಿಯೋಪಿಯ,
ಆಧ್ಯಾತ್ಮಿಕ ರಾಷ್ಟ್ರ ಭಾರತ,
ಧರ್ಮನಿಷ್ಠ ರಾಷ್ಟ್ರ ಇರಾನ್,
ಹಿಂಸಾತ್ಮಕ ರಾಷ್ಟ್ರ ಸಿರಿಯಾ, ಶಾಂತಿಯುತ ರಾಷ್ಟ್ರ ನಾರ್ವೆ,
ಸುಂದರ ರಾಷ್ಟ್ರ ಸ್ವಿಟ್ಜರ್ಲ್ಯಾಂಡ್,
ಯಾವುದೇ ಆಗಿರಲಿ,
ಮಗುವಿನಿಂದ ವೃದ್ಧರವರೆಗೆ,
ಎಲ್ಲರೂ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಲೇಬೇಕು…….
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ತನಗೆ ಎಲ್ಲವೂ ದೊರೆತಾಗಲೂ ಸುಮ್ಮನೆ ಇರಲು ಸಾಧ್ಯವಿಲ್ಲ. ಏನಾದರೂ ಮಾಡಲೇ ಬೇಕು. ಇಲ್ಲದಿದ್ದರೆ ಆತ ನಿರ್ಜೀವಿಯಾಗುತ್ತಾನೆ. ಹಾಗೆಯೇ ಭಿಕ್ಷುಕ ಕೂಡ ತನ್ನ ಮಿತಿಯಲ್ಲಿ ಕೆಲಸ ಮಾಡಲೇಬೇಕು….
ಆದರೆ,
ಕೆಲಸದ ರೂಪಗಳು, ಮಾರ್ಗಗಳು, ಗುರಿಗಳು, ಏರಿಳಿತಗಳು, ಅವಶ್ಯಕತೆಗಳು, ಅನಿವಾರ್ಯಗಳು ಬೇರೆ ಬೇರೆಯಾಗಿರುತ್ತದೆ ಅಷ್ಟೆ.
ಸಾಮಾನ್ಯವಾಗಿ ಮತ್ತು ಸರಳವಾಗಿ ಹೆಚ್ಚು ಶ್ರಮದಾಯಕ ಕೆಲಸ ಮಾಡುವ, ಕಡಿಮೆ ಹಣ ಗಳಿಸುವ, ಹೆಚ್ಚಿನ ಸುರಕ್ಷತೆ ಇಲ್ಲದ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳದ, ಮಾಲೀಕರ ಆಶಯಕ್ಕೆ ಅನುಗುಣವಾಗಿ ದುಡಿಯುವ,
ಬದುಕಿನ ಅನಿವಾರ್ಯತೆಗೆ ಶೋಷಣೆಗೆ ಒಳಗಾಗುವವರನ್ನು ಕಾರ್ಮಿಕರು ಎಂದು ಕರೆಯಲಾಗುತ್ತದೆ.
ಒಂದಷ್ಟು ಹಿಂದೆ ಕೆಲವು ಮನುಷ್ಯರನ್ನು ಗುಲಾಮರೆಂದು ಪರಿಗಣಿಸಿ ಪ್ರಾಣಿಗಳಂತೆ ಅವರವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಪಾರವೂ ಮಾಡಲಾಗುತ್ತಿತ್ತು. ಅವರ ಯಾವ ಮೂಲಭೂತ ಅಂಶಗಳನ್ನು ಪರಿಗಣಿಸಲಾಗುತ್ತಿರಲಿಲ್ಲ.
ಆದರೆ, ಈಗಿನ ಆಧುನಿಕ ಜಗತ್ತಿನಲ್ಲಿ ಇದು ಇಲ್ಲವಾಗಿದೆ.
ಆದರೂ,
ಕಾರ್ಮಿಕ ಶೋಷಣೆ ಬೇರೆ ಬೇರೆ ರೂಪದಲ್ಲಿ ಈಗಲೂ ಜೀವಂತವಿದೆ. ಈ ಬಗ್ಗೆ ಹಿಂದಿನಿಂದಲೂ ಒಂದಷ್ಟು ಪ್ರತಿಭಟನೆಗಳು ಆಗುತ್ತಿದ್ದರೂ ಸಮಗ್ರವಾಗಿ ಜಗತ್ತಿನ ಗಮನಸೆಳೆದ ಕೀರ್ತಿ ಕಾರ್ಲ್ ಮಾರ್ಕ್ಸ್ ಅವರಿಗೆ ಸಲ್ಲುತ್ತದೆ.
ಕಾರ್ಮಿಕರ ಶೋಷಣೆ ನಿಲ್ಲಬೇಕು ನಿಜ, ಆದರೆ ಅದಕ್ಕಾಗಿ ಶ್ರೀಮಂತ ಉದ್ಯಮಿಗಳನ್ನು ದ್ವೇಷಿಸಬಾರದು. ಸಂಘರ್ಷಕ್ಕಿಂತ ಸಮನ್ವಯತೆಗೆ ಹೆಚ್ಚಿನ ಮಹತ್ವ ಕೊಡಬೇಕು.
ಅದರಲ್ಲೂ ಬದಲಾದ ಈ ಆಧುನಿಕ ಕಾಲ ಘಟ್ಟದಲ್ಲಿ ಬಂಡವಾಳ ಶಾಹಿಗಳು ಕೂಡ ಮುಖ್ಯರಾಗುತ್ತಾರೆ. ಶೋಷಣೆ ತಪ್ಪಿಸುವ ಮಾರ್ಗಗಳು ಮುಖ್ಯವಾಗಬೇಕೆ ಹೊರತು ಸೇಡಿನ ಕ್ರಮಗಳು ಮೇಲುಗೈ ಪಡೆಯಬಾರದು. ಅದು ನಕ್ಸಲಿಸಂ ಎಂಬ ಹಿಂಸಾತ್ಮಕ ಸಿದ್ದಾಂತಕ್ಕೆ ದಾರಿ ಮಾಡಿಕೊಡುತ್ತದೆ. ಅದು ತುಂಬಾ ಅಪಾಯಕಾರಿ.
ಈಗಲೂ ನಿಕೃಷ್ಟವಾಗಿ ಬದುಕುತ್ತಿರುವ ಕಾರ್ಮಿಕರು, ಅತ್ಯಂತ ಕಠಿಣ ಕೆಲಸಗಳಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿರುವ ಕಾರ್ಮಿಕರು, ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವ ಮಹಿಳಾ ಕಾರ್ಮಿಕರು,
ಹೋಟೆಲ್ ಮುಂತಾದ ಕಡೆ ಅಸಹನೀಯ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರು ಮುಂತಾದವರ ಜೀವನಮಟ್ಟ ಸುಧಾರಿಸದೆ ದೇಶದ ಅಭಿವೃದ್ಧಿ ಸಾಧ್ಯವೇ ಇಲ್ಲ.
ಈ ಕಾರ್ಮಿಕ ದಿನದ ಸಂದರ್ಭದಲ್ಲಿ ನಮ್ಮ ವ್ಯವಸ್ಥೆಯಲ್ಲಿ, ಕಾರ್ಮಿಕರು, ಬಂಡವಾಳ ಶಾಹಿಗಳು, ವ್ಯಾಪಾರೋದ್ಯಮಿಗಳ ಮಧ್ಯೆ ಒಂದು ಸಮಾನತೆಯ ಮಾನವೀಯತೆಯ ಸಮನ್ವಯ ಸಾಧ್ಯವಾಗಲಿ ಮತ್ತು ಒಬ್ಬರಿಗೊಬ್ಬರು ಪ್ರೀತಿಸುವ ಗೌರವಿಸುವ ವ್ಯವಸ್ಥೆ ನಿರ್ಮಾಣವಾಗಲಿ ಎಂದು ಆಶಿಸುತ್ತಾ…….
ಹೊಟ್ಟೆ ಪಾಡಿನ ಕಾರ್ಮಿಕರಿಂದಲೇ ಚಲಿಸುತ್ತಿರುವ ದೇಶ………..
” ಅಣೋ ಏನಾದ್ರು ಕೆಲ್ಸ ಇದ್ರೇ ಹೇಳು “
” ಏನ್ ಓದಿದಿಯಾ ಏನ್ ಕೆಲ್ಸ ಮಾಡ್ತೀಯಾ “
” ಅಣೋ ಏಳನೇ ಕ್ಲಾಸು. ನೀನ್ ಏನ್ ಹೇಳಿದ್ರೂ ಆ ಕೆಲ್ಸ ಮಾಡ್ತೀನಿ “
” ಆಯ್ತು ಅಲ್ಲಿ ಒಂದು ಹೋಟೆಲ್ ಇದೆ. ಸಪ್ಲೈಯರ್ ಕೆಲಸ ಮಾಡಬೇಕು. ನಿಯತ್ತಾಗಿರಬೇಕು. ಗೊತ್ತಾಯ್ತ. ಸಂಬಳ ಅವರು ಎಷ್ಟು ಕೊಟ್ರೆ ಅಷ್ಟು ಇಸ್ಕೋಬೇಕು ಆ “
” ಆಯ್ತಣೋ ನೀನು ನನ್ನ ಪಾಲಿಗೆ ದೇವ್ರು ಕಣಣ್ಣ “
ಇದು ಒಂದು ಸಾಂಕೇತಿಕ ಸಂಭಾಷಣೆಯ ತುಣುಕು ಮಾತ್ರ.
ಹೋಟೆಲ್ ಇರಲಿ, ಕಟ್ಟಡ ರಸ್ತೆ ನಿರ್ಮಾಣದ ಕೆಲವು ವಿಭಾಗಗಳೇ ಇರಲಿ, ಅಂಗಡಿ ವ್ಯಾಪಾರ, ಮನೆಗೆಲಸ, ವಾಚ್ ಮನ್, ಪ್ಯಾಕಿಂಗ್, ಮೂಟೆ ಹೊರುವುದು, ಕಸ ಗುಡಿಸುವುದು ಮುಂತಾದ ಎಲ್ಲಾ ಕೆಲಸಗಳಿಗೆ ಯಾವುದೇ ತರಬೇತಿ ತಾಂತ್ರಿಕತೆ, ಶಿಷ್ಟಾಚಾರ, ಅನುಭವ ಅರ್ಹತೆ ಇರುವುದಿಲ್ಲ. ಹೊಟ್ಟೆ ಪಾಡೇ ಬಹುಮುಖ್ಯ.
ಗಾರ್ಮೆಂಟ್ಸ್, ಅಡುಗೆ, ವಾಹನ ಚಾಲನೆ, ದಲ್ಲಾಳಿ, ಕಚೇರಿ ಸ್ವಾಗತಕಾರ ಮತ್ತು ಸಹಾಯಕ, ಸಿನಿಮಾ ನಾಟಕ ಧಾರಾವಾಹಿ ನಿರ್ಮಾಣದ ಕೆಲವು ವಿಭಾಗಗಳು, ವಿವಿಧ ವಸ್ತುಗಳ ಸಣ್ಣ ಪುಟ್ಟ ರಿಪೇರಿ ಮತ್ತು ವರ್ಕ್ ಶಾಪ್ ಮುಂತಾದ ಕೆಲಸಗಳು ಸ್ವಲ್ಪ ತರಬೇತಿ ಸ್ವಲ್ಪ ಅನುಭವದೊಂದಿಗೆ ಹೇಗೋ ನಿರ್ವಹಿಸುತ್ತಾರೆ.
ಈ ಎಲ್ಲಾ ಕಡೆಯೂ ಬಹುತೇಕ ಹೊಟ್ಟೆ ಪಾಡು ಮುಖ್ಯವಾಗಿರುತ್ತದೆಯೇ ಹೊರತು ಆ ಕೆಲಸದ ಆಸಕ್ತಿ, ವೃತ್ತಿಪರತೆ, ಕ್ರಿಯಾತ್ಮಕತೆ ಇರುವುದಿಲ್ಲ.
ಹಾಗೆಯೇ, ಸಣ್ಣ ಪುಟ್ಟ ಹೋಟೆಲುಗಳು, ಹಣ್ಣು ತರಕಾರಿ ಬಟ್ಟೆ ಚಪ್ಪಲಿಗಳು, ಬೀಡಿ ಸಿಗರೇಟು ಕಾಂಡಿಮೆಂಟ್ಸ್ ಮುಂತಾದ ವ್ಯಾಪಾರಗಳು ಸಹ ಯಾವುದೋ ಅನಿವಾರ್ಯ ಅಥವಾ ಕೌಟುಂಬಿಕ ನಿರ್ವಹಣೆಗೆ ಅದರ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದಿದ್ದರೂ ಹಣದ ಆಸೆಯಿಂದ ನಿರ್ವಹಿಸುತ್ತಾರೆ.
ಇಲ್ಲಿ ಎಲ್ಲಿಯೂ ನಿರ್ದಿಷ್ಟ ವಿದ್ಯಾರ್ಹತೆ, ವೃತ್ತಿಪರತೆ, ಆ ಕೆಲಸಗಳ ಮೇಲಿನ ಸಂಪೂರ್ಣ ನಿಯಂತ್ರಣ ಇರುವುದಿಲ್ಲ.
ಇದು ವೈಯಕ್ತಿಕ ವಿಷಯವಾದರೆ ಸಮಾಜದ ಮನಸ್ಥಿತಿ ಇನ್ನೂ ವಿಚಿತ್ರ. ಬಹಿರಂಗವಾಗಿ ಹೇಳುವುದು ಮಾತ್ರ ಯಾವ ಕೆಲಸವೂ ಮೇಲು ಕೀಳಲ್ಲ ಎಲ್ಲವೂ ಅದರದೇ ಪಾವಿತ್ರ್ಯತೆ ಹೊಂದಿದೆ. ಆದರೆ ಡಾಕ್ಟರ್ ಗೆ ಕೊಡುವ ಗೌರವ ಕೂಲಿಯವರಿಗೆ ಕೊಡುವುದಿಲ್ಲ, ವಕೀಲರಿಗೆ ಕೊಡುವ ಗೌರವ ಬಟ್ಟೆ ಇಸ್ತ್ರಿ ಮಾಡುವವರಿಗೆ ಕೊಡುವುದಿಲ್ಲ, ಶಿಕ್ಷಕರಿಗೆ ಕೊಡುವ ಗೌರವ ಚಪ್ಪಲಿ ಹೊಲೆಯುವವರಿಗೆ ಕೊಡುವುದಿಲ್ಲ, ಪೋಲಿಸರಿಗೆ ಕೊಡುವ ಗೌರವ ಬಟ್ಟೆ ಹೊಲಿಯುವವರಿಗೆ ಕೊಡುವುದಿಲ್ಲ, ಸೂಟು ಬೂಟಿನವರಿಗೆ ಕೊಡುವ ಗೌರವ ಪಂಚೆ ಕುರ್ತಾ ಅಥವಾ ಚಡ್ಡಿ ಬನಿಯನ್ ತೊಟ್ಟಿರುವ ರೈತರಿಗೆ ಕೊಡುವುದಿಲ್ಲ. ಧರ್ಮಾಧಿಕಾರಿಗಳಿಗೆ ಕೊಡುವ ಗೌರವ ಮನೆಗೆಲಸದವರಿಗೆ ಕೊಡುವುದಿಲ್ಲ. ಕಾರಿನಲ್ಲಿ ಓಡಾಡುವವರಿಗೆ ಕೊಡುವ ಮರ್ಯಾದೆ ಸೈಕಲ್ಲು ಬಸ್ಸಿನಲ್ಲಿ ಓಡಾಡುವವರಿಗೆ ಕೊಡುವುದಿಲ್ಲ. ಏಕೆ ಈ ಆತ್ಮವಂಚನೆ. ವೃತ್ತಿ ಏನೇ ಆಗಿರಲಿ ಮನುಷ್ಯ ಒಂದೇ ಅಲ್ಲವೇ, ಅರ್ಹತೆ, ಸಂಬಳ, ನಿಪುಣತೆ ಏನೇ ಇರಲಿ ವ್ಯಕ್ತಿ ಗೌರವ ಒಂದೇ ಇರಬೇಕಲ್ಲವೇ ?
ಇದು ಎಲ್ಲರ ಮನಸ್ಸಿನಲ್ಲೂ ಇರುವುದರಿಂದಲೇ ಕೆಲಸಗಳಲ್ಲೂ ಸಹ ಮೇಲು ಕೀಳು ಸೃಷ್ಟಿಯಾಗಿದೆ.
ಇನ್ನು ನಿರುದ್ಯೋಗ ಹೆಚ್ಚಾದಂತೆ ಓದಿಗೂ ವೃತ್ತಿಗೂ ಸಂಬಂಧವೇ ಇಲ್ಲದ ಹೊಟ್ಟೆ ಪಾಡಿಗಾಗಿ ಕಾಟಾಚಾರಕ್ಕೆ ತಾತ್ಕಾಲಿಕವಾಗಿ ಯಾವ ಯಾವುದೋ ಕೆಲಸಗಳನ್ನು ಮಾಡುವ ಮತ್ತೊಂದು ವರ್ಗವೂ ಇದೆ. ಸ್ನಾತಕೋತ್ತರ ಪದವೀಧರರು ಸೇಲ್ಸ್ ಮನ್ ಆಗಿ ಬಟ್ಟೆ ಚಪ್ಪಲಿ ಅಂಗಡಿಗಳಲ್ಲಿ,
ಸಿನಿಮಾ ಟಿಕೆಟ್ ಕೌಂಟರಿನಲ್ಲಿ ಅಥವಾ ಇನ್ನೂ ಕೆಳ ಹಂತದಲ್ಲಿ ಕೆಲಸ ಮಾಡುವುದು ಒಂದು ಕಡೆ,
ಹತ್ತನೇ ತರಗತಿ ಫೇಲ್ ಆದವರು ದುಡ್ಡಿನ ಬಲದಿಂದ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅದಕ್ಕೆ ಡಾಕ್ಟರೇಟ್ ಪಡೆದವರನ್ನು ಸಹಾಯಕರಾಗಿ ನೇಮಿಸಿಕೊಂಡು ಅವರಿಗೆ ಪಾಠ ಹೇಳಿಕೊಡುವ ವಿಚಿತ್ರ ಸನ್ನಿವೇಶಗಳು ಇನ್ನೊಂದು ಕಡೆ ಸಹ ಈ ವ್ಯವಸ್ಥೆಯಲ್ಲಿದೆ.
ವೃತ್ತಿ ಪರತೆ, ವೃತ್ತಿ ನೈಪುಣ್ಯತೆ, ತಮಗೆ ಅತ್ಯಂತ ಸಂತೋಷಕರ ವೃತ್ತಿ, ತಮ್ಮ ಸಾಧನೆಯ ಗುರಿ ಹೊಂದಿರುವ ವೃತ್ತಿ ಸಿಗುವುದು ತುಂಬಾ ಅಪರೂಪ.
ನಮ್ಮ ವ್ಯಕ್ತಿತ್ವ ನಾವು ಮಾಡುವ ಕೆಲಸದಲ್ಲಿ ಉಪಯೋಗಕ್ಕೆ ಬಂದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೊಟ್ಟೆ ಪಾಡಿಗೆ ಮಾಡುವಾಗ ನಿರಾಸಕ್ತಿ, ಅಸಹನೆ, ಬೇಜವಾಬ್ದಾರಿ, ಕಾಮ್ ಚೋರ್ ಸ್ವಭಾವ ಮುಂತಾದ ಗುಣಲಕ್ಷಣಗಳು ಅದರ ಗುಣಮಟ್ಟವನ್ನೇ ಕುಗ್ಗಿಸುತ್ತದೆ. ಇದು ದೇಶದ ಒಟ್ಟು ಉತ್ಪನ್ನಗಳು ಮತ್ತು ಸೇವೆಗಳ ತೃಪ್ತಿದಾಯಕ ಮಟ್ಟ ಮುಟ್ಟದಿರಲು ಕಾರಣವಾಗಿದೆ.
ತಳಮಟ್ಟದಲ್ಲಿ ಬಹಳಷ್ಟು ಯುವಕರನ್ನು ನೋಡಿದ್ದೇನೆ. ಭವಿಷ್ಯದಲ್ಲಿ ಹಲವಾರು ಸಾಧನೆಯ ಕನಸುಗಳನ್ನು ಕಾಣುವ ಅವರು ಕೆಲವೇ ವರ್ಷಗಳಲ್ಲಿ ಯಾವುದೋ ಅನಿವಾರ್ಯತೆಗೆ ಬಲಿಯಾಗಿ ಹೊಟ್ಟೆ ಪಾಡಿಗಾಗಿ ಇನ್ನೇನೋ ಕೆಲಸವನ್ನು ಮಾಡುತ್ತಾ ನಿರಾಸೆಯಿಂದ ಬದುಕಿನ ವಿಫಲತೆಯನ್ನು ಹಳಿಯುತ್ತಾ ಜೀವನ ಮಾಡುತ್ತಿದ್ದಾರೆ.
ಚಪ್ಪಲಿ ಹೊಲೆಯುವುದು ಕನಿಷ್ಠ ಕೆಲಸವಲ್ಲದಿದ್ದರೂ ಪದವೀಧರರೊಬ್ಬರು ಅದನ್ನು ಮಾಡುವಾಗ ಅನುಭವಿಸುವ ಮಾನಸಿಕ ಹಿಂಸೆ ಅದನ್ನು ಅನುಭವಿಸುವವರೇ ಬಲ್ಲರು.
ಹೊಟ್ಟೆ ತುಂಬಿಸಿಕೊಳ್ಳುವುದು ಬಡವರ ಜೀವನದ ಧ್ಯೇಯ, ಸ್ವಂತ ಮನೆ ಕಟ್ಟಿಕೊಳ್ಳುವುದು ಮಧ್ಯಮ ವರ್ಗದವರ ಧ್ಯೇಯ, ಸಾಧನೆಯ ಬಗ್ಗೆ ಯೋಚಿಸುವುದು ಯಾವಾಗ…..
ಕಾರ್ಮಿಕ ದಿನದ ಈ ಸಂದರ್ಭದಲ್ಲಿ ನಮ್ಮ ಇಡೀ ಸಮಾಜ ಈ ನಿಟ್ಟಿನಲ್ಲಿ ಯೋಚಿಸಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಪ್ರಯತ್ನಿಸಲಿ ಎಂದು ಆಶಿಸುತ್ತಾ…….
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
