ಉಡುಪಿ: ದಿನಾಂಕ: 26-04-2026 (ಹಾಯ್ ಉಡುಪಿ ನ್ಯೂಸ್) ಅನಧಿಕೃತವಾಗಿ ಮಣ್ಣು ಸಾಗಾಟ ನಡೆಸುತ್ತಿರುವವರ ಬಗ್ಗೆ ಗಣಿ ಇಲಾಖೆ ಗೆ ದೂರು ನೀಡಿದ್ದ ವ್ಯಕ್ತಿ ಗೆ ಲಂಚ ಕೊಡಲು ಬಂದು ಆತ ಪಡೆಯಲು ನಿರಾಕರಿಸಿದಾಗ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ,ಕೆಳಾರ್ಕಳ ಬೆಟ್ಟು ಗ್ರಾಮದ ನಿವಾಸಿ ರಮೇಶ್ ಕೋಟ್ಯಾನ್ (56) ಎಂಬವರು ಕೆಲವು ದಿನಗಳ ಹಿಂದೆ ಅಜಿತ್ ಕುಮಾರ್ ಶೆಟ್ಟಿ ಎಂಬುವವರ ವಿರುದ್ಧ ಅನಧಿಕೃತವಾಗಿ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ಉಡುಪಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿರುತ್ತಾರೆ.
ಇದೇ ವಿಚಾರವಾಗಿ ದಿನಾಂಕ :10/04/2026 ರಂದು ಅಜಿತ್ ಕುಮಾರ್ ರವರು ರಮೇಶ್ ಕೋಟ್ಯಾನ್ ರವರಿಗೆ ಫೋನ್ ಕರೆಮಾಡಿ ಭೇಟಿ ಆಗುವಂತೆ ತಿಳಿಸಿದ್ದು, ಆ ಸಮಯ ರಮೇಶ್ ಕೋಟ್ಯಾನ್ ರವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ತಾಲೂಕು ಕಚೇರಿ ಬಳಿ ಇದ್ದೇನೆ ಎಂದು ತಿಳಿಸಿರುತ್ತಾರೆ. ಮಧ್ಯಾಹ್ನ ಹೊತ್ತಿಗೆ ರಮೇಶ್ ಕೋಟ್ಯಾನ್ ರವರು ಉಡುಪಿ ತಾಲೂಕು ಕಚೇರಿಯ ಮಾವಿನ ಮರದ ಬಳಿ ಕೃಷ್ಣ ಬಜೆ ಮತ್ತು ಶೇಖರ ಬೆಳಪು ಎಂಬವರೊಂದಿಗೆ ಇದ್ದಾಗ ಅಜಿತ್ ಕುಮಾರ್ ಶೆಟ್ಟಿ ಯು ರಮೇಶ್ ಕೋಟ್ಯಾನ್ ರ ಬಳಿ ಬಂದು ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿ, ಒಂದು ವೇಳೆ ದೂರನ್ನು ಹಿಂಪಡೆದರೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ 2 ಲಕ್ಷ ದೇಣಿಗೆಯನ್ನು ನೀಡುವುದಾಗಿ ಆಮಿಷವನ್ನು ಒಡ್ಡಿರುತ್ತಾರೆ. ಇದಕ್ಕೆ ರಮೇಶ್ ಕೋಟ್ಯಾನ್ ರು ಯಾವುದೇ ಕಿಮ್ಮತ್ತು ತೋರಿಸದೇ ಸ್ಥಳದಿಂದ ಹೋಗುತ್ತಿದ್ದಾಗ ಅಜಿತ್ ಕುಮಾರ್ ಶೆಟ್ಟಿಯು ರಮೇಶ್ ಕೋಟ್ಯಾನ್ ರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 3(1)(r) 3(1)(s) SC/ST POA act ರಂತೆ ಪ್ರಕರಣ ದಾಖಲಾಗಿದೆ.
