ಬ್ರಹ್ಮಾವರ: ದಿನಾಂಕ: 20-03-2026( ಹಾಯ್ ಉಡುಪಿ ನ್ಯೂಸ್) ಯಡ್ತಾಡಿ ಗ್ರಾಮದ ಗರ್ಕಿ ಮಠ ಎಂಬಲ್ಲಿ ನ ಕಲ್ಲು ಕೋರೆ ಒಂದರಲ್ಲಿ ನಿಂತ ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟಿದ್ದಾನೆ.
ತಮಿಳುನಾಡು ಪಳನಿ ನಿವಾಸಿ ತಂಗವೇಲು (43)ಎಂಬವರು ಯಡ್ತಾಡಿ ಗ್ರಾಮದ ಗರ್ಕಿಮಠ ಎಂಬಲ್ಲಿರುವ ಬಶಿರ್ ಮತ್ತು ಶರತ್ ಶೆಟ್ಟಿ ಎಂಬವರು ನಡೆಸುವ ಶಿಲೆಗಲ್ಲು ಕೋರೆಯಲ್ಲಿ ಕಲ್ಲು ಒಡೆಯುವ ಕೆಲಸ ಮಾಡಿಕೊಂಡು ಅಲ್ಲೇ ಕೋರೆಯ ಮೇಲೆ ರಸ್ತೆಯ ಬದಿಯಲ್ಲಿರುವ ಕಾರ್ಮಿಕರ ರೂಮಿನಲ್ಲಿ ತನ್ನ ಮಗ ಮಣಿಕಂಠ ಹಾಗೂ ಕಳೆದ 4 ದಿನದ ಹಿಂದೆ ಅವರ ಊರಿನಿಂದ ಬಂದ ಅವರ ಚಿಕ್ಕಪ್ಪನ ಮಗ ಅರುಣ ಎಂಬವರ ಜತೆ ವಾಸವಾಗಿದ್ದು, ದಿನಾಂಕ 19.03.2026 ರಂದು ಬೆಳಿಗ್ಗೆ ಅರುಣನು ಸಮೀಪದ ಕಲ್ಲುಕೋರೆಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ.
ಈ ಕಲ್ಲು ಕೋರೆಯಲ್ಲಿ ಕಲ್ಲು ತೆಗೆದ ಪರಿಣಾಮ ಸ್ಥಳದಲ್ಲಿ ಗುಂಡಿ ಉಂಟಾಗಿ ಮಳೆ ನೀರು ನಿಂತು ಸುಮಾರು 20 ಅಡಿ ನೀರು ಇದ್ದು, ಇದಕ್ಕೆ ಯಾವುದೇ ತಡೆಬೇಲಿ, ಸೂಚನಾ ಫಲಕ ಇರುವುದಿಲ್ಲ. ಕೆಲಸಗಾರರು ಅಲ್ಲೇ ಪಕ್ಕದಲ್ಲಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದು ನೀರು ನಿಂತ ಸ್ಥಳಕ್ಕೆ ತಡೆ ಬೇಲಿ ಹಾಕಿ ಸೂಚನಾ ಫಲಕವನ್ನು ಅಳವಡಿಸಿ ಕ್ರಮ ವಹಿಸಿದ್ದರೆ ಅರುಣನ ಸಾವು ಸಂಭವಿಸುತ್ತಿರಲಿಲ್ಲ.
ಕಲ್ಲು ಕೋರೆಯನ್ನು ನಡೆಸುವ ಬಶೀರ್, ಶರತ್ ಶೆಟ್ಟಿ ಮತ್ತು ಇತರರು ನಿರ್ಲಕ್ಷತನ ತೋರಿಸಿದ್ದರಿಂದ ಸ್ಥಳದಲ್ಲಿ ಸ್ನಾನಕ್ಕೆಂದು ನೀರಿಗೆ ಇಳಿದ ಅರುಣ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಅರುಣನ ಸಾವಿಗೆ ಕಲ್ಲು ಕೋರೆ ನಡೆಸುತ್ತಿರುವವರ ನಿರ್ಲಕ್ಷ್ಯ ವೇ ಕಾರಣ ಎಂದು ತಂಗವೇಲು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 106(1) ಜೊತೆಗೆ 34 BNS ರಂತೆ ಪ್ರಕರಣ ದಾಖಲಾಗಿದೆ.
