ದಿನಾಂಕ:12-01-2026(ಹಾಯ್ ಉಡುಪಿ ನ್ಯೂಸ್)
ಕುಶಾಲನಗರ :ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಹೀನಾಯ ಹಾಗೂ ಅವಮಾನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಡಗು ಅಭಿವೃದ್ಧಿ ಸಮಿತಿಯ ವತಿಯಿಂದ ಇಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸಲಾಯಿತು.
ದೂರು ಸಲ್ಲಿಸುವ ವೇಳೆ ಕೊಡಗು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷರಾದ ಪ್ರಸನ್ನ ಭಟ್, ಗೌರವಾಧ್ಯಕ್ಷರಾದ ಮಾದಪ್ಪ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಗೀತಾ ಹಾಗೂ ಗೌರವ ಸಲಹೆಗಾರರಾದ ಯಾದವ ರಾವ್ ಉಪಸ್ಥಿತರಿದ್ದರು.
ದೂರು ಸ್ವೀಕರಿಸಿದ ಕುಶಾಲನಗರ ಠಾಣಾಧಿಕಾರಿಗಳು ಸಮಿತಿಗೆ ಸ್ವೀಕೃತಿ ರಸೀದಿ ನೀಡಿದ್ದು, ಸಂಬಂಧಿಸಿದ ವ್ಯಕ್ತಿಯ ವಿರುದ್ಧ ನಿಷ್ಪಕ್ಷಪಾತ ಹಾಗೂ ಕಟ್ಟುನಿಟ್ಟಿನ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕೊಡಗಿನ ಹೆಣ್ಣುಮಕ್ಕಳ ಗೌರವ, ಆತ್ಮಗೌರವ ಮತ್ತು ಸುರಕ್ಷತೆಗೆ ಧಕ್ಕೆಯಾಗುವ ಯಾವುದೇ ಹೇಳಿಕೆಗಳು ಅಥವಾ ಕೃತ್ಯಗಳನ್ನು ಕೊಡಗು ಅಭಿವೃದ್ಧಿ ಸಮಿತಿ ತೀವ್ರವಾಗಿ ಖಂಡಿಸುತ್ತಿದ್ದು, ಇಂತಹ ವಿಚಾರಗಳಲ್ಲಿ ಕಾನೂನು ಕ್ರಮ ಅನಿವಾರ್ಯವೆಂದು ಸಮಿತಿ ತಿಳಿಸಿದೆ.
