ಭಯೋತ್ಪಾದನೆಯ ವಿಷಯದಲ್ಲಿ ನಾವು ಮಾಡಬೇಕಾಗಿರುವುದು ಈ ವಿಷಯಗಳ ಬಗ್ಗೆ ಚಿಂತಿಸುವುದು. ಏಕೆಂದರೆ ಭಯೋತ್ಪಾದನೆ ಎಂಬುದು ಒಂದು ಅತ್ಯಂತ ನಟೋರಿಯಸ್ ಕ್ರಿಮಿನಲ್ ಅಪರಾಧ. ಅದು ನಮ್ಮಂತ ಸಾಮಾನ್ಯ ಜನರ ಊಹೆಗೂ ನಿಲುಕುವುದಿಲ್ಲ. ಅದನ್ನು ಎದುರಿಸಲು ಪೊಲೀಸರು, ಅರೆಸೈನಿಕರು, ಸೈನಿಕರು ಇಂಟೆಲಿಜೆನ್ಸ್, ರಾ, ಎನ್ಐಎ, ನಮ್ಮ ಆಡಳಿತ ವ್ಯವಸ್ಥೆ ಮುಂತಾದವರಿಗೆ ಮಾತ್ರ ಸಾಧ್ಯ. ಅವರು ಆ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ. ಆದರೆ ಸಾಮಾನ್ಯ ಜನರಾದ ನಾವು ಈ ವಿಷಯದಲ್ಲಿ ಮಾಡಬಹುದಾದದ್ದು ಏನು.
ನಮ್ಮ ಮಟ್ಟದಲ್ಲಿ ನಾವು ಹರಿಯ ಬಿಡಬೇಕಾಗಿರುವುದು ಮನುಷ್ಯತ್ವದ ಮೌಲ್ಯಗಳನ್ನು. ಜಾತಿ, ಧರ್ಮ, ಭಾಷೆ, ಪ್ರದೇಶ, ಸ್ವಾರ್ಥ ಎಲ್ಲವನ್ನು ಮೀರಿ ಜನತೆ ಮತ್ತು ದೇಶದ ಹಿತಾಸಕ್ತಿಯಿಂದ ಯಾವುದು ಉತ್ತಮ ಅನಿಸುತ್ತದೆಯೋ ಆ ಬಗ್ಗೆ ಹೆಚ್ಚು ಹೆಚ್ಚು ಚರ್ಚೆ ಮಾಡಬೇಕು. ಪರಿವರ್ತನೆಗೆ ಪ್ರಯತ್ನಿಸಬೇಕು.
ಈ ಭೂಮಂಡಲದಲ್ಲಿ ಪ್ರಕೃತಿ ಮತ್ತು ಅನೇಕ ಜೀವರಾಶಿಗಳು ಅಸ್ತಿತ್ವದಲ್ಲಿದೆ. ಪ್ರಕೃತಿ ಭಾವನಾತ್ಮಕವಾಗಿ ಜೀವಂತವಿದ್ದರೂ ಬಹುತೇಕ ಅದು ನಿರ್ಜೀವ. ಆದರೆ ಜೀವರಾಶಿಗಳಿಗೆ ಜೀವವಿದೆ. ಪ್ರಾಣವಿದೆ. ಭಾವನೆಗಳಿವೆ, ಬದುಕುವ ಆಸೆ ಇದೆ, ಸಾಯುವ ಭಯವಿದೆ. ಈ ಕಾರಣದಿಂದ ನಮ್ಮ ಚಿಂತನೆಗಳು ಮನುಷ್ಯನ ಬಗ್ಗೆ ಹೆಚ್ಚು ಕೇಂದ್ರೀಕೃತವಾಗಿರಬೇಕು. ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಅರ್ಥವಾಗಬೇಕಾದ ವಿಷಯ ದೇವರು, ಧರ್ಮ, ಜಾತಿ, ಭಾಷೆ ಇವು ಯಾವುವೂ ಪ್ರಕೃತಿಯಲ್ಲಿ ಸಹಜವಾಗಿ ಬಂದದ್ದಲ್ಲ. ಎಲ್ಲವನ್ನು ಮನುಷ್ಯನೇ ತನ್ನ ಅನುಕೂಲಕ್ಕಾಗಿ ನಿರ್ಮಿಸಿಕೊಂಡದ್ದು ಮನುಷ್ಯನ ಕ್ರಮಬದ್ಧ ಜೀವನ ಶೈಲಿಗಾಗಿ.
ಇಂದು ಅದೇ ನಮ್ಮ ಪಾಲಿನ ಶತ್ರುಗಳಾಗಿದೆ. ಆ ಯಾವ ದೇವರು, ಧರ್ಮಗಳು ನಮ್ಮನ್ನು ಕಾಪಾಡುತ್ತಿಲ್ಲ. ನಮ್ಮನ್ನು ನಾವೇ ಇವುಗಳ ಹೆಸರಿನಲ್ಲಿ ಒಬ್ಬರನ್ನೊಬ್ಬರು ಕೊಂದುಕೊಳ್ಳುತ್ತಿದ್ದೇವೆ. ಹಾಗಾದರೆ ಇವುಗಳನ್ನು ಮೀರಿದ ಚಿಂತನೆಯ ಅವಶ್ಯಕತೆ ಬರಬೇಕಿದೆ. ದೇವರು ಮತ್ತು ಧರ್ಮದ ಜಾಗದಲ್ಲಿ ಸಂವಿಧಾನವೆಂಬ ನೀತಿ ನಿಯಮಗಳ ಪುಸ್ತಕವಿದೆ. ಈಗ ನಾವು ನಿಜಕ್ಕೂ ಅನುಸರಿಸಬೇಕಾಗಿರುವುದು ಆ ಸಂವಿಧಾನ ಪುಸ್ತಕವನ್ನು ಹೊರತು ಧರ್ಮದ ಆಚರಣೆಗಳನ್ನಲ್ಲ……
ಧರ್ಮ ರಕ್ಷಣೆಗಾಗಿ ಅಧರ್ಮ ಅಥವಾ ಹಿಂಸೆ ಸರಿಯೇ ? ಒಪ್ಪಿತವೇ ? ಈಗಲೂ ಪ್ರಸ್ತುತವೇ ?
ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ದ, ಜೈನ ಮತ್ತು ಇನ್ನೂ ಅಧೀಕೃತ ಮಾನ್ಯತೆ ಪಡೆಯದ ಬಸವ ಧರ್ಮದ ಮೂಲ ಆಶಯಗಳ ಹಿನ್ನೆಲೆಯಲ್ಲಿ………..
ಬೌದ್ದ ಮತ್ತು ಜೈನ ಧರ್ಮಗಳು ಅಹಿಂಸೆ ಮತ್ತು ಸರಳತೆಯನ್ನು, ಆಸೆ ಮತ್ತು ನಿಯಂತ್ರಣಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಹಿಂಸೆಯನ್ನು ಯಾವುದೇ ರೂಪದಲ್ಲೂ ಪ್ರೋತ್ಸಾಹಿಸುವುದಿಲ್ಲ. ಧರ್ಮ ರಕ್ಷಣೆಯ ಒತ್ತಡವನ್ನು ಹೇರುವುದಿಲ್ಲ.
ಬಸವ ಧರ್ಮ ಸಮ ಸಮಾಜದ, ಕಾಯಕ ತತ್ವದ ಅಡಿಯಲ್ಲಿ ಸಕಲರಲ್ಲಿ ಒಳ್ಳೆಯದನ್ನೇ ಬಯಸುವ ಆಶಯವನ್ನು ಹೊಂದಿದೆ. ದಯವೇ ಧರ್ಮ ಮೂಲ ಎನ್ನುತ್ತದೆ. ಇನ್ನು ಹಿಂಸೆಯ ಮಾತೆಲ್ಲಿ….
ಬುದ್ದ, ಮಹಾವೀರ ಕೇಂದ್ರಿತ ಜೈನ ತೀರ್ಥಂಕರರು ಮತ್ತು ಬಸವೇಶ್ವರರು ವ್ಯಕ್ತಿ ಕೇಂದ್ರಿತ ಚಿಂತನೆಗಳ ಆಧಾರದಲ್ಲಿ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಕೆಲವು ಅಂಶಗಳನ್ನು ಹೇಳಿದ್ದಾರೆ. ಅವುಗಳನ್ನು ಧರ್ಮ ಎನ್ನುವುದಕ್ಕಿಂತ ಬದುಕಿನ ಸಾರ್ಥಕತೆಯ ಮಾರ್ಗ ಸೂತ್ರಗಳು ಎನ್ನಬಹುದು.
ಒಂದು ರೀತಿಯಲ್ಲಿ ಈ ಧರ್ಮಗಳು ಅಥವಾ ವಿಚಾರಗಳು ಹಿಂದೂ ಜೀವನ ಶೈಲಿಯ ಬಂಡಾಯದ ರೂಪಾಂತರಗಳು ಎಂದು ಸರಳವಾಗಿ ಹೇಳಬಹುದು.
ಕ್ರಿಶ್ಚಿಯನ್ ಧರ್ಮದಲ್ಲಿ ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ, ಸಮಾಜದ ಅತ್ಯಂತ ದುರ್ಬಲ ವರ್ಗದವರನ್ನು ಪ್ರೀತಿಸಿ – ಅವರಿಗೆ ನೆರವಾಗಿ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆ ಧರ್ಮದ ಅನುಯಾಯಿಗಳು ಅನಂತರದಲ್ಲಿ ಮತಾಂತರಕ್ಕೆ ಪ್ರೋತ್ಸಾಹಿಸಿದರು ಎಂಬುದು ನಿಜ. ಆದರೆ ಅದು ಆಸೆ ಆಮಿಷಗಳ ರೂಪದಲ್ಲಿ ಹೆಚ್ಚಾಗಿ ಕಂಡುಬರುತ್ತದೆಯೇ ಹೊರತು ಈಗಿನ ಕಾಲದಲ್ಲಿ ಹಿಂಸೆಯ ರೂಪ ಅಷ್ಟಾಗಿ ಕಾಣುವುದಿಲ್ಲ.
ಆದರೆ,
ಹಿಂದೂ ಮತ್ತು ಇಸ್ಲಾಂ ಧರ್ಮದಲ್ಲಿ ಧರ್ಮದ ರಕ್ಷಣೆಗಾಗಿ ಹಿಂಸೆಯ ಪ್ರತಿಪಾದನೆ ಬೇರೆ ಬೇರೆ ರೂಪದಲ್ಲಿ ಕಂಡುಬರುತ್ತವೆ.
ಕಾನೂನಿನ ಪರಿಭಾಷೆಯಂತೆ ಧರ್ಮದ ಅರ್ಥವನ್ನು ಸಹ ಅನೇಕ ಕೋನಗಳಲ್ಲಿ ವಿಧವಿಧವಾಗಿ ಅರ್ಥೈಸಬಹುದು.
ಆದರೆ ಇಲ್ಲಿ ಸಾಮಾನ್ಯ ಜನರ ಸಾಮಾನ್ಯ ತಿಳಿವಳಿಕೆಯ ಆಧಾರದಲ್ಲಿ ಇದನ್ನು ನೋಡುವ ಒಂದು ಪ್ರಯತ್ನ….
ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯಲ್ಲಿ, ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸುವ ಸಂದೇಶದಲ್ಲಿ ಧರ್ಮ ರಕ್ಷಣೆಗಾಗಿ ಅಧರ್ಮಿಗಳನ್ನು ಕೊಲ್ಲಬೇಕಾಗುತ್ತದೆ. ಅದಕ್ಕಾಗಿ ತಂತ್ರ ಪ್ರತಿತಂತ್ರ, ಹಿಂಸೆ ಸೇರಿ ಯಾವುದೇ ಮಾರ್ಗವನ್ನು ಅನುಸರಿಸಬಹುದು. ಇಲ್ಲದಿದ್ದರೆ ಅಧರ್ಮ, ಅನ್ಯಾಯ ಹೆಚ್ಚಾಗಿ ಇಡೀ ಸಮಾಜದ ಅಸ್ತಿತ್ವವೇ ಕುಸಿದು ಹೋಗುತ್ತದೆ. ಅಧರ್ಮಿಗಳು ಮತ್ತು ಅವರ ಬೆಂಬಲಿಗರು ಸಹ ಶಿಕ್ಷೆಗೆ ಅರ್ಹರು ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ.
ಬಹುತೇಕ ಇದೇ ಅರ್ಥಕೊಡುವ ಅಂಶಗಳನ್ನು ಇಸ್ಲಾಂ ಸಹ ಪ್ರತಿಪಾದಿಸುತ್ತದೆ. ಇಲ್ಲಿ ಕೆಲವು ಗೊಂದಲಗಳು ಇವೆ ಅಥವಾ ಹುಟ್ಟುಹಾಕಲಾಗಿದೆ ಅಥವಾ ಅರ್ಥೈಸಲಾಗಿದೆ.
ಕಾಫೀರರನ್ನು ಕೊಲ್ಲಿ ಎಂದು ಹೇಳಲಾಗಿದೆಯಂತೆ. ಅಂದರೆ ಅಧರ್ಮೀಯರನ್ನು ಅಥವಾ ಧರ್ಮಕ್ಕೆ ವಿರೋಧ ಇರುವವರನ್ನು ಅಥವಾ ಅನ್ಯ ಧರ್ಮೀಯರನ್ನು ಕೊಂದು ಇಸ್ಲಾಂ ಧರ್ಮ ರಕ್ಷಿಸಿ ಎಂದು ಅರ್ಥೈಸಲಾಗುತ್ತದೆ.
ಭಗವದ್ಗೀತೆಯ ಅರ್ಥದಂತೆ ಅಧರ್ಮೀಯರನ್ನು ಕೊಂದಾದರೂ ಧರ್ಮ ರಕ್ಷಿಸಿ ಎಂಬುದು ಮೂಲ ಇಸ್ಲಾಂ ಧರ್ಮದ ಆಶಯ.
ಆದರೆ ಆಧುನಿಕ ಕಾಲದ ಕೆಲವು ಭಯೋತ್ಪಾದಕ ಸಂಘಟನೆಗಳು ಮತ್ತು ಇಸ್ಲಾಂ ವಿರೋಧಿ ಗುಂಪಿನವರು ಇಡೀ ಜಗತ್ತೇ ಅಲ್ಲಾ ಎಂಬ ದೇವರ ಸೃಷ್ಟಿ. ಆದ್ದರಿಂದ ಜಗತ್ತನ್ನೇ ಇಸ್ಲಾಮೀಕರಣ ಮಾಡಿ ಎಂದು ತಪ್ಪು ಮಾಹಿಯ ನೀಡಿ ಇಸ್ಲಾಂ ಎಂದರೆ ಹಿಂಸೆ ಎಂಬುದಾಗಿ ತಪ್ಪು ಕಲ್ಪನೆ ಮೂಡಿಸಿದ್ದಾರೆ ಎಂದೂ ಹೇಳಲಾಗುತ್ತದೆ.
ಒಟ್ಟಿನಲ್ಲಿ ಮೂಲ ಧರ್ಮ ರಚಿಸಿದವರ ಆಶಯ ಮತ್ತು ಉದ್ದೇಶ ಏನೇ ಇರಲಿ, ಇಂದಿನ ಎರಡೂ ಧರ್ಮದ ಅನುಯಾಯಿಗಳನ್ನು ಅವರ ಆಚರಣೆಗಳನ್ನು ಅವರ ಅಭಿಪ್ರಾಯಗಳನ್ನು ಅವರ ನಡವಳಿಕೆಗಳನ್ನು ನೋಡಿದಾಗ ಇಬ್ಬರಲ್ಲೂ ಶ್ರೇಷ್ಠತೆಯ ವ್ಯಸನ ಮತ್ತು ಇನ್ನೊಂದು ಧರ್ಮದ ಬಗ್ಗೆ ಅಸಹನೆ – ದ್ವೇಷ ತುಂಬಿಕೊಂಡಿರುವುದನ್ನು ಕಾಣಬಹುದು. ಅಲ್ಲದೇ ಹಿಂಸೆಯನ್ನು ಮಾಡಿಯಾದರೂ ನಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ.
ಈ ಎರಡೂ ಧರ್ಮದ ತತ್ವಗಳಲ್ಲಿ ವ್ಯಕ್ತಿಯನ್ನು ಗೌಣವಾಗಿಸಿ ಧರ್ಮವನ್ನು ಎತ್ತಿಹಿಡಿಯಲಾಗಿದೆ. ಆತನ ಸ್ವತಂತ್ರ ಚಿಂತನೆಗಳಿಗೆ ಕಡಿವಾಣ ಹಾಕಲಾಗಿದೆ. ಧರ್ಮದ ನೆರಳಲ್ಲಿ ಬದುಕನ್ನು ನಡೆಸಲು ಸೂಚಿಸಲಾಗಿದೆ. ಈ ಕಾರಣದಿಂದಲೇ ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂಸೆ ಜಾಸ್ತಿಯಾಗಿದೆ.
ಈ ಸಂದರ್ಭದಲ್ಲಿ ನಾವು ಮಾಡಬಹುದಾದದ್ದು ಏನು ???
ಯಾರು ಒಪ್ಪಲಿ ಅಥವಾ ಒಪ್ಪದಿರಲಿ ಈ ಕ್ಷಣದ ಈ ಧರ್ಮಗಳು ನಮ್ಮ ವಿನಾಶಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಈ ಧರ್ಮದ ಆಚರಣೆಗಳು ಮತ್ತು ನಂಬಿಕೆಗಳನ್ನು ಖಾಸಗಿ ಸಂಪ್ರದಾಯವಾಗಿ ಮನೆಯೊಳಗಿನ ವ್ಯವಹಾರದಂತೆ ಭಾವಿಸಬೇಕು. ಸಾರ್ವಜನಿಕವಾಗಿ ನಮ್ಮ ದೇಶದ ಸಂವಿಧಾನವೇ ನಿಜವಾದ ಧರ್ಮ ಎಂದು ಅದಕ್ಕೆ ನಿಷ್ಠರಾಗಿರಬೇಕು.
ಕಾಲಕ್ಕೆ ತಕ್ಕಂತೆ ಕೆಲವು ನಿಯಮಾವಳಿಗಳನ್ನು ಜನರ ಶ್ರೇಯೋಭಿವೃದ್ದಿಗಾಗಿ ತಿದ್ದುಪಡಿ ಮಾಡುತ್ತಾ, ವ್ಯಕ್ತಿಯ ಘನತೆಯನ್ನು, ಸ್ವಾತಂತ್ರ್ಯ ಸಮಾನತೆಯನ್ನು ಕಾಪಾಡುತ್ತಾ ಸಂವಿಧಾನವೇ ಧರ್ಮ ಎಂದು ಭಾವಿಸಿದಲ್ಲಿ ಆಧುನಿಕ ನಾಗರಿಕ ಸಮಾಜದ ಬದುಕು ಧರ್ಮದ ಕಾಲಕ್ಕಿಂತ ಹೆಚ್ಚು ಸಹನೀಯ ಮತ್ತು ನೆಮ್ಮದಿಯತ್ತ ಸಾಗುತ್ತದೆ. ಈ ವಿಷಯದಲ್ಲಿ ನೀವು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಮತ್ತೊಮ್ಮೆ ಯೋಚಿಸಿ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
