ದಿನಾಂಕ:18-10-2025(ಹಾಯ್ ಉಡುಪಿ ನ್ಯೂಸ್)ಕಲಬುರಗಿ : ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾಗಿರುವ ಮತಕಳ್ಳತನ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ಕಲಬುರಗಿಯಲ್ಲಿ ತಲಾಶ್ ಮುಂದುವರಿಸಿದೆ.
ಕಲಬುರಗಿ : ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾಗಿರುವ ಮತಕಳ್ಳತನ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ಕಲಬುರಗಿಯಲ್ಲಿ ತನಿಖೆ ಮುಂದುವರಿಸಿದೆ.
ನಗರದ ರೋಜಾ ಬಡಾವಣೆಯಲ್ಲಿರುವ ಕಂಪ್ಯೂಟರ್ ಆಪರೇಟರ್ ಅಶ್ಪಾಕ್ ಮನೆ ಹಾಗೂ ಜಮ್ ಜಮ್ಮೇ ಕಾಲೋನಿಯಲ್ಲಿರುವ ಕಂಪ್ಯೂಟರ್ ಆಪರೇಟರ್ ಅಕ್ರಮ್ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಬುಧವಾರ ಹಾಗೂ ಗುರುವಾರ ಪ್ರಮುಖ 5 ಸ್ಥಳಗಳಲ್ಲಿ ನಡೆದ ತಪಾಸಣೆಯಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ. ಇಬ್ಬರು ಆರೋಪಿಗಳ ಮನೆಯಲ್ಲಿ ರಾಶಿ ರಾಶಿ ವೋಟರ್ ಐಡಿಗಳು, 15 ಮೊಬೈಲ್, 7 ಲ್ಯಾಪ್ಟಾಪ್ಗಳನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ಅಶ್ಪಾಕ್ ಸದ್ಯ ದುಬೈನಲ್ಲಿದ್ದಾನೆ.
ರೋಜಾ ಬಡಾವಣೆಯ ದರ್ಗಾ ಏರಿಯಾ ಸೇರಿದಂತೆ ನಗರದ ಕೆಲ ಭಾಗಗಳಲ್ಲಿ ಎಸ್ಐಟಿ ಟೀಂ ದಾಳಿ ನಡೆಸಿದೆ. ಕಳೆದ ಚುನಾವಣೆಯಲ್ಲಿ ವ್ಯಾಪಕ ಮತಗಳ್ಳತನ ನಡೆದಿದೆ ಎಂದು ಆಳಂದ ಶಾಸಕ ಬಿಆರ್ ಪಾಟೀಲ್ ಆರೋಪಿಸಿದ್ದರು. ಈ ಆರೋಪಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ಬಂದು, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ SIT ತನಿಖೆಗೆ ಆದೇಶ ನೀಡಿತ್ತು. ಕಳೆದ ಕೆಲ ದಿನಗಳಿಂದ ಕಲ್ಬುರ್ಗಿಯಲ್ಲಿ ಬೀಡು ಬಿಟ್ಟಿದ್ದ SIT ತಂಡ ಇಂದು ಚುರುಕುಗೊಂಡಿದ್ದು ಸರ್ಚ್ ವಾರಂಟ್ಗಳೊಂದಿಗೆ ಮನೆಗಳ ಶೋಧ ನಡೆಸುತ್ತಿದೆ.
