ಪಡುಬಿದ್ರಿ: ದಿನಾಂಕ:10-10-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ದೈಹಿಕ, ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿ ಚಿನ್ನಾಭರಣ ಲಪಟಾಯಿಸಿದ್ದಾರೆ ಎಂದು ನೊಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹೇಶ್ ಶೆಟ್ಟಿ ಎಂಬವನು ಕಾಪು ತಾಲೂಕು ಹೆಜಮಾಡಿ ಗ್ರಾಮದ ನಿವಾಸಿ ಕೀರ್ತಿ ಶೆಟ್ಟಿ (35) ಎಂಬವರ ಗಂಡನಾಗಿದ್ದು, 2ನೇ ಆರೋಪಿ ಪದ್ಮಿನಿ, ಕೀರ್ತಿ ಶೆಟ್ಟಿ ಅವರ ಅತ್ತೆಯಾಗಿದ್ದು,3ನೇ ಆರೋಪಿ ಹರಿಣಾಕ್ಷಿ ಅತ್ತೆಯ ತಂಗಿಯಾಗಿರುತ್ತಾಳೆ ಎನ್ನಲಾಗಿದೆ.
ಕೀರ್ತಿ ಶೆಟ್ಟಿ ಅವರು ಸುಮಾರು 13 ವರ್ಷಗಳ ಹಿಂದೆ ಹೆಜಮಾಡಿ ಗ್ರಾಮದ ಗುಡ್ಡೆ ಮನೆ 1ನೇ ಆಪಾದಿತ ಮಹೇಶ ಶೆಟ್ಟಿ ಎಂಬುವವರನ್ನು ಗುರುಹಿರಿಯರ ಒಪ್ಪಿಗೆಯಂತೆ ವಿವಾಹವಾಗಿ ಗಂಡನ ಮನೆಯಾದ ಹೆಜಮಾಡಿ ಗುಡ್ಡೆ ಅಂಗಡಿ ಎಂಬಲ್ಲಿ ವಾಸವಾಗಿದ್ದರು ಎನ್ನಲಾಗಿದೆ .
ಆಪಾದಿತ ಮಹೇಶ್ ಶೆಟ್ಟಿ ಯು ಕೆಲವು ವರ್ಷಗಳವರೆಗೆ ಒಳ್ಳೆಯ ರೀತಿಯಲ್ಲಿ ಕೀರ್ತಿ ಯವರನ್ನು ನೋಡಿಕೊಳ್ಳುತ್ತಿದ್ದು, ನಂತರದ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಗಳಿಗೆ ಕೀರ್ತಿ ಯವರಿಗೆ ಹೊಡೆಯುತ್ತಿದ್ದನು ಎನ್ನಲಾಗಿದೆ . ಸುಮಾರು ಒಂದು ವರ್ಷದಿಂದ 2ನೇ ಆರೋಪಿ ಅತ್ತೆ ಪದ್ಮಿನಿ ಅವರ ತಂಗಿ 3ನೇ ಆರೋಪಿ ಹರಿಣಾಕ್ಷಿಯು ಗಂಡನ ಮನೆಗೆ ಬಂದ ಬಳಿಕ ಕೀರ್ತಿ ರವರಿಗೆ ಆರೋಪಿಗಳು ವಿಪರೀತ ಮಾನಸಿಕ ಕಿರುಕುಳ ಹಾಗೂ ದೈಹಿಕ ಹಲ್ಲೆ ಮಾಡುತ್ತಿದ್ದದ್ದಲ್ಲದೇ ಕೀರ್ತಿ ರವರ ತಂದೆಯು ಮಕ್ಕಳನ್ನು ನೋಡಲು ಮನೆಗೆ ಬಂದಾಗ ಅವರಿಗೂ ಬೈದು ಕಳುಹಿಸಿರುತ್ತಾರೆ ಎನ್ನಲಾಗಿದೆ.
ದಿನಾಂಕ: 05/10/2025 ರಂದು ಮಧ್ಯಾಹ್ನ ಕೀರ್ತಿ ರವರನ್ನು ನೋಡಲು ಅವರ ಅಮ್ಮ ಮತ್ತು ಮನೆಯವರು ಬಂದಾಗ ಅವರಲ್ಲಿ ಜಗಳ ತೆಗೆದು ಹೋಗುವಂತೆ ತಿಳಿಸಿರುತ್ತಾರೆ. ಅಲ್ಲದೇ ಅದೇ ದಿನ ರಾತ್ರಿ ಇದೇ ವಿಚಾರದಲ್ಲಿ ಕೀರ್ತಿ ರವರನ್ನು ಮನೆ ಬಿಟ್ಟು ಹೋಗು ಎನ್ನುತ್ತಾ ಗಂಡ ಮಹೇಶ್ ಶೆಟ್ಟಿ ಯು ಕೈಯಿಂದ ಕೀರ್ತಿ ರವರಿಗೆ ಹಲ್ಲೆ ಮಾಡಿದ್ದು ಆ ಸಮಯ ಅತ್ತೆ ಪದ್ಮಿನಿ ಮತ್ತು ಹರಿಣಾಕ್ಷಿ ಯವರು ಕೀರ್ತಿ ರವರ ಕೈಯನ್ನು ಗಟ್ಟಿಯಾಗಿ ಹಿಡಿದು ಹೊಡೆದಿರುತ್ತಾರೆ ಎನ್ನಲಾಗಿದೆ. ಆರೋಪಿಗಳು ಕೀರ್ತಿ ರವರನ್ನು ತನ್ನ ಮಕ್ಕಳೊಂದಿಗೆ ಮಾತನಾಡಲು ಬಿಡುವುದಿಲ್ಲ. ಮದುವೆಯ ಸಮಯ ಕೀರ್ತಿ ರವರಿಗೆ ಹಾಕಿದ ಚಿನ್ನಾಭರಣ ಆರೋಪಿ ಮಹೇಶ್ ಶೆಟ್ಟಿ ಯ ಬಳಿ ಇದೆ ಎಂದೂ ಹಲ್ಲೆಯಿಂದ ಗಾಯಗೊಂಡ ಕೀರ್ತಿ ಶೆಟ್ಟಿ ರವರು ದಿನಾಂಕ 06/10/2025 ರಂದು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ 85,115(2),118(1) ಜೊತೆಗೆ3(5) BNS ರಂತೆ ಪ್ರಕರಣ ದಾಖಲಾಗಿದೆ.
