Spread the love

ಉಡುಪಿ: ದಿನಾಂಕ:26-07-2025(ಹಾಯ್ ಉಡುಪಿ ನ್ಯೂಸ್)

ಉಡುಪಿ: ಕೋಟ ಅವಳಿ ಕೊಲೆ ಪ್ರಕರಣದ ಆರೋಪಿ, ಮಾಜಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಜಾಮೀನು ರದ್ದುಗೊಳಿಸಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅವಳಿ ಕೊಲೆ ಪ್ರಕರಣದಲ್ಲಿ ಕೋಟತಟ್ಟು ಗ್ರಾಮದ ಬಾರಿಕೇರಿ ನಿವಾಸಿ ರಾಘವೇಂದ್ರ ಕಾಂಚನನನ್ನು ಪೊಲೀಸರು ಫೆ.7ರಂದು ಬಂಧಿಸಿದ್ದರು. 2023ರ ಜೂ.28ರಂದು ಹೈಕೋರ್ಟ್ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ನೀಡಿತ್ತು.

2025ರ ಮೇ 31ರಂದು ರಾಘವೇಂದ್ರ ಹಿಂದು ಜಾಗರಣಾ ವೇದಿಕೆ ಕೋಟ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಹಳೆಯ ವಿಡಿಯೋಗಳನ್ನು ಹಂಚಿಕೊಂಡು, ಜಾತಿ ಮತ್ತು ಧರ್ಮಗಳ ನಡುವೆ ವೈರತ್ವ ಮತ್ತು ಕೋಮು ಗಲಭೆ ಉಂಟು ಮಾಡಲು ಪ್ರೇರೇಪಿಸಿ ಪರಸ್ಪರ ಧರ್ಮಗಳ ನಡುವೆ ಕೋಮು ಗಲಭೆಗೆ ದುಷ್ಪೇರಣೆ ನೀಡಿದ್ದನು. ಈ ಬಗ್ಗೆ ಈತನ ವಿರುದ್ದ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಘವೇಂಧ್ರ ಕಾಂಚನ್ ವಿಚಾರಣಾ ನ್ಯಾಯಾಲಯದ ಅನುಮತಿಯನ್ನು ಪಡೆಯದೆ ಉಡುಪಿ ಜಿಲ್ಲೆಯನ್ನು ಬಿಟ್ಟು ಹೊರ ಹೋಗದಂತೆ ಹಾಗೂ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗದಂತೆ ಜಾಮೀನು ಆದೇಶದಲ್ಲಿ ಷರತ್ತುಗಳನ್ನು ವಿಧಿಸಲಾಗಿತ್ತು. ಈತನು ಹೈಕೋರ್ಟಿನ ಜಾಮೀನು ಆದೇಶದಲ್ಲಿ ವಿಧಿಸಲಾದ ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈತನಿಗೆ ಮಂಜೂರಾದ ಜಾಮೀನು ಆದೇಶವನ್ನು ರದ್ದುಗೊಳಿಸುವಂತೆ ವರದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯ ಆರೋಪಿಗೆ ನೀಡಿದ ಜಾಮೀನು ರದ್ಧುಗೊಳಿಸಿ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ನೀಡಿದೆ.

error: No Copying!