Spread the love

ದಿನಾಂಕ:24-07-2025(ಹಾಯ್ ಉಡುಪಿ ನ್ಯೂಸ್)

ಉಡುಪಿ:  ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲೆಯ ಪದವಿ ಪೂರ್ವ ಹಾಗೂ  ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಮಾದಕ ದ್ರವ್ಯ ವಿರೋಧಿ ಹಾಗೂ ಜಾಗೃತಿ ಸಮಿತಿ ಸಭೆಯನ್ನು ಉಡುಪಿಯ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಗುರುವಾರ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಬಳಕೆಯನ್ನು ಸಂಪೂರ್ಣ ನಿಯಂತ್ರಿಸುವ ನಿಟ್ಟಿನಲ್ಲಿ ವಾರದೊಳಗೆ ಎಲ್ಲಾ ಶಾಲಾ ಕಾಲೇಜು ಗಳಲ್ಲಿ ಮಾದಕ ದ್ರವ್ಯ ವಿರೋಧಿ ಹಾಗೂ ಜಾಗೃತಿ ಸಮಿತಿ ರಚಿಸಬೇಕು. ಈ ಸಮಿತಿಯ ಮೂಲಕ ಮಾದಕ ವಸ್ತು ಸೇವನೆಯನ್ನು ಪತ್ತೆ ಹಚ್ಚಲು ಎಸೆಸೆಲ್ಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದ ಮಾದರಿ ಪರೀಕ್ಷೆಯನ್ನು ಮಾಡಬೇಕು ಎಂದರು.

ವಿದ್ಯಾ ಸಂಸ್ಥೆಗಳಲ್ಲಿನ ಮಾದಕ ದ್ರವ್ಯ ವಿರೋಧಿ ಹಾಗೂ ಜಾಗೃತಿ ಸಮಿತಿ ಯಲ್ಲಿ ಪ್ರಾಂಶುಪಾಲರು, ಸಿಬ್ಬಂದಿ, ಮಕ್ಕಳು ಇರಬೇಕು. ವಿದ್ಯಾಸಂಸ್ಥೆ ವ್ಯಾಪ್ತಿಗೆ ಒಳಪಡುವ ಪೊಲೀಸ್ ಠಾಣೆಗಳಲ್ಲಿನ ಮುಖ್ಯಸ್ಥರಾದ ಪೊಲೀಸ್ ನಿರೀಕ್ಷಕರು/ಪೊಲೀಸರು ಉಪನಿರೀಕ್ಷಕರು ಈ ಸಮಿತಿಗೆ ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ ಎಂದು ಎಸ್ಪಿ ತಿಳಿಸಿದರು.

ಕಾಲೇಜು ಆಡಳಿತ ಮಂಡಳಿ ನಿರಂತರವಾಗಿ ಪೊಲೀಸರ ಸಂಪರ್ಕದಲ್ಲಿದ್ದರೆ ಅಲ್ಲಿನ ಮಕ್ಕಳು ಇಂತಹ ದುಶ್ಚಟಗಳಿಗೆ ಬಲಿ ಬೀಳುವುದು ಕಡಿಮೆ ಆಗುತ್ತದೆ. ಪೊಲೀಸ್ ಠಾಣೆಯ ಅಧಿಕಾರಿ ಅಥವಾ ಸಿಬ್ಬಂದಿ ಸಮ್ಮುಖದಲ್ಲಿ ಪ್ರತಿ ತಿಂಗಳು ಈ ಕಮಿಟಿಯ ಸಭೆಯನ್ನು ಮಾಡಬೇಕು. ಮೂರು ತಿಂಗಳಿಗೊಮ್ಮೆ ನೋಡೆಲ್ ಅಧಿಕಾರಿಯನ್ನು ಸಭೆಗೆ ಕರೆಸಬೇಕು. ನೋಡೆಲ್ ಅಧಿಕಾರಿಗೆ ನೀಡಿದ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸಲ್ಲ. ಎಲ್ಲ ಮಾಹಿತಿ ಯನ್ನು ಗೌಪ್ಯವಾಗಿ ಇಡಲಾಗುವುದು. ತಿಂಗಳಿಗೆ ಒಮ್ಮೆ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆಗಳಲ್ಲಿ ಮಾಡಬೇಕು ಎಂದರು.

ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷಾ ಪ್ರಿಯಂ ವಧಾ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರ್ಗೀಸ್ ಪಿ,ಡಿವೈಎಸ್ಪಿ ಪ್ರಭು ಡಿ.ಟಿ. ಉಪಸ್ಥಿತರಿದ್ದರು.

error: No Copying!