
ಕಾರವಾರ: ದಿನಾಂಕ :13-07-2025(ಹಾಯ್ ಉಡುಪಿ ನ್ಯೂಸ್) ರಷ್ಯಾ ಮೂಲದ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳ ಜೊತೆಗೆ ಗೋಕರ್ಣ ಬಳಿಯ ಬೆಟ್ಟವೊಂದರ ಗುಹೆಯಲ್ಲಿ ವಾಸ ಇದ್ದುದನ್ನು ಪೊಲೀಸರು ಪತ್ತೆ ಮಾಡಿದ್ದು ಮೂವರನ್ನೂ ರಕ್ಷಣೆ ಮಾಡಿದ್ದಾರೆ. ಕುಮಟಾ ತಾಲ್ಲೂಕಿನ ರಾಮತೀರ್ಥ ಬೆಟ್ಟದಲ್ಲಿರುವ ಅಪಾಯಕಾರಿ ಗುಹೆಯಲ್ಲಿ ಮಹಿಳೆಯನ್ನು ಅಲ್ಲಿಂದ ಹೊರಕ್ಕೆ ತರಲಾಗಿದೆ.
ಮೋಹಿ ಎಂದು ಗುರುತಿಸಲ್ಪಟ್ಟ ಈ ಮಹಿಳೆ ತನ್ನ ಹೆಣ್ಣುಮಕ್ಕಳಾದ 6 ವರ್ಷದ ಪ್ರೇಯಾ ಮತ್ತು 4 ವರ್ಷದ ಅಮಾ ಜೊತೆ ದಟ್ಟವಾದ ಕಾಡುಗಳ ಮಧ್ಯದ ಗುಹೆಯೊಳಗೆ ವಾಸವಾಗಿದ್ದರು. ರುದ್ರ ವಿಗ್ರಹದ ಬಳಿ ಈ ಕುಟುಂಬ ತಾತ್ಕಾಲಿಕ ವಾಸಸ್ಥಳ ನಿರ್ಮಿಸಿಕೊಂಡಿತ್ತು. ಅಲ್ಲಿ ಮೋಹಿ ತನ್ನ ದಿನಗಳನ್ನು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ಕಳೆಯುತ್ತಿದ್ದಳೆಂದು ಹೇಳಲಾಗುತ್ತಿದೆ. ಆಧ್ಯಾತ್ಮಿಕ ಶಾಂತಿಯನ್ನು ಬಯಸಿ ಗುಹೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ.
ಪೊಲೀಸರು ಗಸ್ತು ತಿರುಗುತ್ತಿದ್ದಾಗ ದೂರದ ಬೆಟ್ಟದ ಗುಹೆಯ ಹೊರಗೆ ಬಟ್ಟೆ ಒಣಗಿ ಹಾಕಿದ್ದು ಕಾಣಿಸಿತ್ತು. ಅನುಮಾನ ಬಂದು ಗುಹೆ ಬಳಿ ತೆರಳಿದಾಗ ಬಟ್ಟೆ ಧರಿಸದ ಪುಟ್ಟ ಮಗು ಕಂಡಿದ್ದು ಪೊಲೀಸರನ್ನು ನೋಡಿ ಒಳಗೆ ಓಡಿ ಹೋಗಿತ್ತು. ಮಗುವಿನ ಹಿಂದೆ ಹೋದಾಗ ಚಿಕ್ಕ ದೀಪವನ್ನಿಟ್ಟು ತನ್ನ ದೊಡ್ಡ ಮಗುವಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಿದ್ದ ಮಹಿಳೆಯನ್ನು ಕಂಡು ಪೊಲೀಸರಿಗೆ ಅಚ್ಚರಿ ಆಗಿತ್ತು. ಗುಹೆ ಸಂಪೂರ್ಣ ಕತ್ತಲಾಗಿದ್ದು ಗುಹೆಯ ಸುತ್ತ ಬೃಹತ್ ಗಾತ್ರದ ಸರ್ಪಗಳಿರುವುದರಿಂದ ಆ ಪ್ರದೇಶದಲ್ಲಿ ಟ್ರೆಕ್ಕಿಂಗ್ ನಿಷೇಧಿಸಿ ಫೆನ್ಸಿಂಗ್ ಹಾಕಲಾಗಿದೆ. ಫೆನ್ಸಿಂಗ್ ಇದ್ದರೂ ಮಹಿಳೆ ಪಕ್ಕದ ಗುಡ್ಡದಿಂದ ಗುಹೆ ಒಳಗಡೆ ಹೋಗಿ ನೆಲೆಸಿದ್ದರು. ಈ ಹಿಂದೆಯೂ ಬಹಳಷ್ಟು ಬಾರಿ ಇದೇ ಗುಹೆಯಲ್ಲಿ ಬಂದು ನೆಲೆಸಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾರೆ.
ಗುಹೆ ಇರುವ ರಾಮತೀರ್ಥ ಬೆಟ್ಟವು ಜುಲೈ 2024ರಲ್ಲಿ ಭಾರೀ ಭೂಕುಸಿತಕ್ಕೆ ಸಾಕ್ಷಿಯಾಗಿತ್ತು. ಪೊಲೀಸರು ಬಳಿಕ ಮಹಿಳೆಗೆ ಅಪಾಯದ ಬಗ್ಗೆ ಸಲಹೆ ನೀಡಿ, ಆಕೆ ಹಾಗೂ ಇಬ್ಬರು ಮಕ್ಕಳನ್ನು ಬೆಟ್ಟದಿಂದ ಕೆಳಕ್ಕೆ ಕರೆತಂದಿದ್ದಾರೆ. ಆಕೆಯ ಕೋರಿಕೆ ಮೇರೆಗೆ, ಕುಮಟಾ ತಾಲ್ಲೂಕಿನ ಬಂಕಿಕೊಡ್ಲ ಗ್ರಾಮದಲ್ಲಿರುವ 80 ವರ್ಷದ ಮಹಿಳಾ ಸನ್ಯಾಸಿ ಸ್ವಾಮಿ ಯೋಗರತ್ನ ಸರಸ್ವತಿ ನಡೆಸುತ್ತಿರುವ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ.
ಮೋಹಿ ರಷ್ಯಾದಿಂದ 2016ರಲ್ಲಿ ಗೋವಾಕ್ಕೆ ಕೆಲಸಕ್ಕೆಂದು ಬಂದಿದ್ದು 2017ರ ಬಳಿಕ ಕಂಪನಿ ಕೆಲಸದಿಂದ ತೆಗೆದುಹಾಕಿತ್ತು. ಆಬಳಿಕ ಗೋವಾದಿಂದ ನೇಪಾಳಕ್ಕೆ ತೆರಳಿ ಅಲ್ಲಿ ಕೆಲವು ದಿನ ನೆಲೆಸಿದ್ದರು. ಮತ್ತೆ ಗೋವಾಕ್ಕೆ ಬಂದು ಅಲ್ಲಿಂದ ಆಗಾಗ ಗೋಕರ್ಣಕ್ಕೆ ಬಂದು ಈ ಗುಹೆಯಲ್ಲಿ ನೆಲೆಸುತ್ತಿದ್ದರು. ಸಂಪೂರ್ಣ ಆಧ್ಯಾತ್ಮಿಕತೆಯತ್ತ ವಾಲಿರುವ ಮಹಿಳೆ ಏಕಾಂತ ಹೆಚ್ಚು ಇಷ್ಟ ಪಡುತ್ತಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾರೆ. ಭಾರತ ಭಾರತೀಯ ಸಂಸ್ಕೃತಿಯ ಬಗ್ಗೆ ನನಗೆ ಭಾರಿ ಗೌರವ ಇದೆ, ನಾನು ಋಷಿ ಮುನಿಗಳ ತರ ಗುಹೆಯಲ್ಲಿ ಇರಲು ಖುಷಿ ಇದೆ ಎಂದು ತಿಳಿಸಿದ್ದಾರೆ.
ಪೊಲೀಸರು ರಷ್ಯಾ ದೇಶದ ಆಕೆಯ ಕುಟುಂಬಸ್ಥರನ್ನು ಸಂಪರ್ಕಿಸಿದ್ದು ಮಹಿಳೆಯನ್ನು ಬೆಂಗಳೂರಿನ ನೋಂದಣಿ ಕಚೇರಿಗೆ ಕರೆದೊಯ್ದು ಮರಳಿ ರಷ್ಯಾಕ್ಕೆ ಕಳುಹಿಸಲು ಏರ್ಪಾಡು ಮಾಡಿದ್ದಾರೆ.