
ಕಾರ್ಕಳ: ದಿನಾಂಕ:25-05-2025(ಹಾಯ್ ಉಡುಪಿ ನ್ಯೂಸ್) ಕೆದಿಂಜೆ ಗ್ರಾಮದ ಮಂಜರಪಲ್ಕೆಯಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಇಬ್ಬರನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಂದರ ಅವರು ಬಂಧಿಸಿದ್ದಾರೆ.
ದಿನಾಂಕ 25/05/2025 ರಂದು ಮಧ್ಯಾಹ್ನ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಕೆದಿಂಜೆ -ನಂದಳಿಕೆ ಗ್ರಾಮದ ಬೀಟ್ ಕರ್ತವ್ಯ ದ ಸಿಬ್ಬಂದಿರವರು ಪೊಲೀಸ್ ಉಪ ನಿರೀಕ್ಷಕರಾದ ಸುಂದರ ಅವರಿಗೆ ಕರೆ ಮಾಡಿ ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಮಂಜರಪಲ್ಕೆಯಲ್ಲಿರುವ ಶೇಷಗಿರಿ ಎಂಬವರಿಗೆ ಸೇರಿದ ಕಟ್ಟಡದ ಪಕ್ಕದಲ್ಲಿ ಅಂಗಡಿಗಳ ಶೆಡ್ ಹಿಂಭಾಗದಲ್ಲಿ ಕೆಲವೊಂದು ವ್ಯಕ್ತಿಗಳು ಸಾರ್ವಜನಿಕರಿಂದ ತಮ್ಮ ಸ್ವಂತ ಲಾಭಕ್ಕೋಸ್ಕರ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಪಡೆದು ಅಂಕಿಗಳನ್ನು ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬೀಟ್ ಸಿಬ್ಬಂದಿಯಿಂದ ದೊರೆತ ಖಚಿತ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಂದರ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಆಪಾದಿತರಾದ ಸಾಜನ್ ಮತ್ತು ಅಜಿತ್ ಕುಮಾರ್ ಎಂಬವರುಗಳನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಆರೋಪಿತರ ವಶದಲ್ಲಿದ್ದ ನಂಬರ್ ಬರೆಯಲು ಇರಿಸಿದ್ದ 2 ಖಾಲಿ ಹಾಳೆಗಳು ಮತ್ತು ನಂಬರ್ ಬರೆದಿರುವ ಒಂದು ಹಾಳೆ, ಅಂಕಿ ಬರೆದು ನೀಡಲು ಇಟ್ಟಿದ್ದ ಬಿಳಿ ಬಣ್ಣದ ಕಾಗದದ ಸಣ್ಣ ಸ್ಲಿಪ್ ಗಳು, 2 ಪೆನ್, ಆಪಾದಿತರು ಕುಳಿತುಕೊಳ್ಳಲು ಉಪಯೋಗಿಸಿದ 2 ಪ್ಲಾಸ್ಟಿಕ್ ಕುರ್ಚಿ, ಮರದ ಟೇಬಲ್ -1 ಮತ್ತು ಮಟ್ಕಾ ಜುಗಾರಿ ಆಡಲು ತಂದು ಕಟ್ಟಿದ್ದ ರೂಪಾಯಿ 2,930/- ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ .
ಈ ಬಗ್ಗೆ 72/2025 ಕಲಂ 78(iii) KP Act & 112(1), R/w 3(5) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದೆ.