Spread the love

ದಿನಾಂಕ: 12-04-2025 (ಹಾಯ್ ಉಡುಪಿ ನ್ಯೂಸ್) ಕೊಲ್ಕೋತಾ: ಪಶ್ಚಿಮ ಬಂಗಾಳದ ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಸಂಧರ್ಭ ಇಬ್ಬರು ಸಾವನ್ನಪ್ಪಿದ್ದಾರೆ ಎಂದು IPS ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಹಿಂಸಾಚಾರ ಪೀಡಿತ ಸಂಸರ್‌ಗಂಜ್ ಪ್ರದೇಶದ ಜಾಫ್ರಾಬಾದ್‌ನಲ್ಲಿರುವ ತಮ್ಮ ಮನೆಯೊಳಗೆ ಇದ್ದಾಗ ತಂದೆ ಹಾಗೂ ಮಗನಿಗೆ ಅನೇಕ ಬಾರಿ ಚಾಕುವಿನಿಂದ ಇರಿದಿರುವುದು ಪತ್ತೆಯಾಗಿದೆ. ಮನೆಯೊಳಗೆ ಬಿದ್ದಿದ್ದ ಅವರಿಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದುಷ್ಕರ್ಮಿಗಳು ತಮ್ಮ ಮನೆಯನ್ನು ಲೂಟಿ ಮಾಡಿದ್ದಾರೆ. ಹೊರಡುವ ಮೊದಲು ಚಾಕುವಿನಿಂದ ಇಬ್ಬರಿಗೆ ಇರಿದಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಸಂಸರ್‌ಗಂಜ್ ಬ್ಲಾಕ್‌ನ ಧುಲಿಯನ್‌ನಲ್ಲಿ ಇಬ್ಬರು ವ್ಯಕ್ತಿಗಳು ಗುಂಡೇಟಿನಿಂದ ಗಾಯಗೊಂಡಿದ್ದರು. ಶುಕ್ರವಾರ ಪೊಲೀಸರು ನಡೆಸಿದ ಗುಂಡೇಟಿನಿಂದ ಹದಿಹರೆಯದ ಯುವಕನೋರ್ವ ಗಾಯಗೊಂಡಿದ್ದ ಎಂದು IPS ಅಧಿಕಾರಿ ತಿಳಿಸಿದ್ದಾರೆ.

ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಜಿಲ್ಲೆಯ ಸುಟಿ ಮತ್ತು ಸಂಸರ್‌ಗಂಜ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ದೊಡ್ಡ ಪ್ರಮಾಣದ ಹಿಂಸಾಚಾರ ವರದಿಯಾಗಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಇದುವರೆಗೆ 118 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಾಪಕ ಪ್ರತಿಭಟನೆಗಳ ನಡುವೆ, ರಾಜ್ಯದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಭರವಸೆ ನೀಡಿದ್ದಾರೆ.  ಅನೇಕರು ಪ್ರತಿಭಟಿಸುತ್ತಿರುವ ಕಾನೂನನ್ನು ನಾವು ಮಾಡಿಲ್ಲ. ಕೇಂದ್ರ ಸರ್ಕಾರ ಈ ಕಾನೂನು ಮಾಡಿದೆ. ಹಾಗಾಗಿ ನಿಮಗೆ ಬೇಕಾದ ಉತ್ತರವನ್ನು ಕೇಂದ್ರ ಸರ್ಕಾರದಿಂದ ಕೇಳಬೇಕು ಎಂದು ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ನಮ್ಮ ನಿಲುವನ್ನು ಸ್ಪಷ್ಪಪಡಿಸಿದ್ದೇವೆ. ಈ ಕಾನೂನನ್ನು ನಾವು ಬೆಂಬಲಿಸಿಲ್ಲ. ನಮ್ಮ ರಾಜ್ಯದಲ್ಲಿ ಈ ಕಾನೂನು ಜಾರಿಯಾಗಲ್ಲ. ಹಾಗಾದರೆ ಗಲಭೆ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಅವರ ಆಮಿಷಗಳಿಗೆ ಮಣಿಯಬೇಡಿ. “ಧರ್ಮ ಎಂದರೆ ಮಾನವೀಯತೆ, ಸದ್ಭಾವನೆ, ನಾಗರಿಕತೆ ಮತ್ತು ಸೌಹಾರ್ದತೆ ಎಂದು ನಾನು ಭಾವಿಸುತ್ತೇನೆ. ಎಲ್ಲರೂ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಲು ಮನವಿ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

error: No Copying!