
ಕೋಟ: ದಿನಾಂಕ 23/02/2025 (ಹಾಯ್ ಉಡುಪಿ ನ್ಯೂಸ್) ವೈನ್ ಶಾಪ್ ಒಂದರಲ್ಲಿ ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳು ಹಾಗೂ ಮದ್ಯ ಸೇವನೆಗೆ ಅವಕಾಶ ಮಾಡಿ ಕೊಟ್ಟ ಇಬ್ಬರ ಮೇಲೆ ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ರಾಘವೇಂದ್ರ ಸಿ ರವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ರಾಘವೇಂದ್ರ.ಸಿ ರವರು ದಿನಾಂಕ : 22-02-2025 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೇಳೂರು ಗ್ರಾಮದ ಮೊಗೆಬೆಟ್ಟು ಎಂಬಲ್ಲಿರುವ ಕುಬೇರ ವೈನ್ಸ್ ಶಾಪ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕವಾಗಿ ಮದ್ಯವನ್ನು ಸೇವಿಸುತ್ತಿರುವುದಾಗಿ ಬೇಳೂರು ಗ್ರಾಮದ ಬೀಟ್ ಸಿಬ್ಬಂದಿರವರಿಗೆ ಮಾಹಿತಿದಾರರು ತಿಳಿಸಿದ ಮೇರೆಗೆ ಪಿಎಸ್ಐ ಯವರು ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕುಬೇರ ವೈನ್ ಶಾಪ್ ನ ಬಳಿಯಿರುವ ಕ್ಯಾಬಿನ್ ನ ಒಳಗೆ ಜನರು ಕುಳಿತುಕೊಂಡು ಸಾರ್ವಜನಿಕವಾಗಿ ಮದ್ಯ ಸೇವಿಸುತ್ತಿರುವುದು ಪೊಲೀಸರಿಗೆ ಕಂಡು ಬಂದಿದ್ದು ಪೊಲೀಸರು ಧಾಳಿ ನಡೆಸಿದಾಗ ಕ್ಯಾಬಿನ್ ಒಳಗೆ ಮೂವರು ವ್ಯಕ್ತಿಗಳು ಟೇಬಲ್ ಎದುರು ಕುಳಿತುಕೊಂಡು ಸಾರ್ವಜನಿಕವಾಗಿ ಮದ್ಯಪಾನ ಸೇವಿಸುತ್ತಾ ಕುಳಿತಿದ್ದು , ಪೊಲೀಸರು ಅವರ ಹೆಸರು ವಿಚಾರಿಸಿದಾಗ 1) ರತೀಶ್ (20), 2) ಪ್ರೀತಮ್ (26) 3) ಶ್ರೀಜಿತ್ ಅಚಾರಿ (27) ಎಂಬುವುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ .
ಅವರ ಟೇಬಲ್ ಮೇಲೆ 2 ಖಾಲಿ ಬೀಯರ್ ಬಾಟಲಿ ಹಾಗೂ ಮದ್ಯಪಾನ ಕುಡಿಯುವ ಒಂದು ಖಾಲಿ ಗ್ಲಾಸ್ ಇತ್ತೆನ್ನಲಾಗಿದೆ. ನಂತರ ವೈನ್ಸ ಶಾಪ್ ಗೆ ತಾಗಿಕೊಂಡಿರುವ ಅಡುಗೆ ಮನೆಯ ಹೋಟೆಲ್ ನ ಒಳಗಿನ ಟೇಬಲ್ ಮೇಲೆ ಓರ್ವ ವ್ಯಕ್ತಿ ಸ್ಟೀಲ್ ಲೋಟದಲ್ಲಿ ಮದ್ಯ ಪಾನ ಹಾಕಿ ಸೇವಿಸುತ್ತಿದ್ದು ಆತನ ಹೆಸರು ವಿಳಾಸ ವಿಚಾರಣೆ ನಡೆಸಿದಾಗ ತನ್ನ ಹೆಸರು ವೇಲು 37 ವರ್ಷ ಎಂದು ತಿಳಿಸಿದ್ದು ಅವನ ಟೇಬಲ್ ಮೇಲೆ ಖಾಲಿ ಟೆಟ್ರಾ ಪ್ಯಾಕ್ ಗಳು -3 ಹಾಗೂ ಮದ್ಯ ಸೇವಿಸಲು ಉಪಯೋಗಿಸಿದ ನೀರು ಕುಡಿಯುವ ಸ್ಟೀಲ್ ಲೋಟ -1 ಇತ್ತೆಂದು ದೂರಿನಲ್ಲಿ ದಾಖಲಿಸಿದ್ದಾರೆ. ಅವೆಲ್ಲವುಗಳನ್ನು ಮುಂದಿನ ಕ್ರಮಕ್ಕಾಗಿ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ವೈನ್ ಶಾಪ್ ನಲ್ಲಿ ಕುಳಿತುಕೊಂಡು ಸಾರ್ವಜನಿಕವಾಗಿ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟ ಕುಬೇರ ವೈನ್ ಶಾಪ್ ನಡೆಸುತ್ತಿರುವ ರತ್ನಾಕರ ಹಾಗೂ ಅದನ್ನು ತಂದು ಕೊಟ್ಟ ಸದಾನಂದ ಎಂಬವರ ಮೇಲೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 15(A) KE Act ರಂತೆ ಪ್ರಕರಣ ದಾಖಲಾಗಿದೆ.